ಬಂಧನ
(ಪ್ರಾತಿನಿಧಿಕ ಚಿತ್ರ)
ಸಂಕೇಶ್ವರ: ಎರಡು ದಿನಗಳ ಹಿಂದೆ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಸಂಕೇಶ್ವರ ಪೊಲೀಸರು 7 ಜನ ಆರೋಪಿಗಳನ್ನು ಬುಧವಾರ ಬಂಧಿಸಿದ್ದಾರೆ. ಬಂಧಿತರಿಂದ ಒಂದು ತಲವಾರ, 3 ಮೊಬೈಲ್ ಹಾಗೂ ಒಂದು ಕಾರು ವಶಪಡಿಸಿಕೊಳ್ಳಲಾಗಿದೆ.
ಶ್ಯಾಮರಾವ ಮೋಹನ ಯಾದವ (ಸಂಕೇಶ್ವರ), ಸುನೀಲ ಅಶೋಕ ಪಾಂಡವ (ಹಾಥಕಣಗಲಾ), ಸೂರಜ್ ಬಾಳಾಸಾಹೇಬ ವೈದ್ಯ (ಕಬನೂರು), ಸಮೀರ ತುಕಾರಾಮ ಪಾಟೀಲ (ಸಂಕೇಶ್ವರ), ಸಂಕೇತ ಉಮೇಶ ಮೇತ್ರಿ (ಇಚಲಕರಂಜಿ), ಅಶೋಕ ವಿಲಾಸ ಪಾಟೀಲ (ಪಡ್ಲಿಹಾಳ) ಹಾಗೂ ಸಂತೋಷ ದೊಂಡಿಬಾ ಶೇಲಾರ (ಹರಗಾಪೂರ ಗಡ) ಅವರನ್ನು ಬಂಧಿಸಲಾಗಿದೆ. ಇನ್ನಿಬ್ಬರು ಆರೋಪಿಗಳ ಹುಡುಕಾಟಕ್ಕೆ ಶೋಧ ನಡೆದಿದೆ.
ಫೆ.23ರಂದು ರಾತ್ರಿ 9 ಗಂಟೆಯ ಸುಮಾರಿಗೆ ದತ್ತಾತ್ರೇಯ ಶ್ರೀಕಾಂತ ಥೊರವತ್ ಅವರ ಮೇಲೆ ಅನಾಮಧೇಯ ಜನರ ಗುಂಪೊಂದು ತಲವಾರಿನಿಂದ ತೀವ್ರ ಹಲ್ಲೆ ಮಾಡಿತ್ತು. ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಲ್ಲೆ ನಡೆಸಿದವರ ಶೋಧನೆಗೆ ತಂಡವನ್ನು ರಚಿಸಿದ್ದರು.
ಹಿಂದೂ ಸಂಘಟನೆಗಳ ನೇತೃತ್ವ ವಹಿಸುವ ಸಂಬಂಧ ನಡೆದ ಜಗಳವೇ ಈ ಮಾರಣಾಂತಿಕ ಹಲ್ಲೆಗೆ ಕಾರಣ ಎನ್ನಲಾಗಿದೆ. ಈ ಹಿಂದೆ ಸಂಕೇಶ್ವರದಲ್ಲಿ ನಡೆಯುವ ಎಲ್ಲ ಹಿಂದೂ ಸಂಘಟನೆಗಳ ಕಾರ್ಯಕ್ರಮಗಳ ಮುಂದಾಳತ್ವವನ್ನು ಸಮೀರ ತುಕಾರಾಮ ಪಾಟೀಲ ವಹಿಸಿಕೊಳ್ಳುತ್ತಿದ್ದ. ಈಚೆಗೆ ನಡೆದ ಸಮಾವೇಶದ ಮುಂದಾಳತ್ವವನ್ನು ಸದ್ಯ ಗಾಯಾಳಾದ ದತ್ತಾತ್ರೆಯ ಶ್ರೀಕಾಂತ ಥೋರವತ್ ವಹಿಸಿಕೊಂಡಿದ್ದ. ಈ ಜಗಳವೇ ಈ ಹಲ್ಲೆಗೆ ಕಾರಣ ಆಗಿರಬಹುದು ಎಂದು ಪೋಲಿಸರಿಗೆ ಸಿಕ್ಕಿರುವ ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.