
ಗೋಕಾಕ: ಸತೀಶ ಶುಗರ್ಸ್ ಅವಾರ್ಡ್ಸ ಕೇವಲ ಒಂದು ವೇದಿಕೆ ಅಲ್ಲ, ಸಂಸ್ಕೃತಿ, ಸೌಹಾರ್ದತೆಯ ಪ್ರತೀಕವಾಗಿದೆ ಎಂದು ಕಳೆದ ಸಾಲಿನ ಸತೀಶ್ ಶುಗರ್ಸ್ ಅವಾರ್ಡ್ಸ ಭಾಷಣ ಸ್ವರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ರಾಜಾಪೂರ ಗ್ರಾಮದ ಜ್ಞಾನ ಗಂಗೋತ್ರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ ಐಶ್ವರ್ಯ ಕೊಡ್ಲಿ ಹೇಳಿದಳು.
ಶುಕ್ರವಾರ ಇಲ್ಲಿನ ಮಹರ್ಷಿ ಶ್ರೀ ವಾಲ್ಮೀಕಿ ತಾಲ್ಲೂಕು ಕ್ರೀಡಾಂಗಣದಲ್ಲಿ ಸತೀಶ್ ಜಾರಕಿಹೊಳಿ ಫೌಂಡೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮೂರು ದಿನಗಳ 22ನೇ ಸತೀಶ್ ಶುಗರ್ಸ್ ಆವಾರ್ಡ್ಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದಳು.
ಕಳೆದ 22 ವರ್ಷಗಳಿಂದ ಈ ಭವ್ಯ ಕಾರ್ಯಕ್ರಮ ಜನರ ಮನ, ಮನಗಳಲ್ಲಿ ಮನೆ ಮಾಡಿದೆ. ಸಹಸ್ರಾರು ವಿದ್ಯಾರ್ಥಿಗಳ ದಾರಿ ದೀಪವಾಗಿ ಪರಿಣಮಿಸಿದೆ. ಇದು ಪ್ರತಿಭೆಯ ಸಂಭ್ರಮವಾಗಿದೆ. ಎಲೆಮರೆ ಕಾಯಿಯಂತೆ ಇರುವ ಸಾವಿರಾರು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ ಎಂದು ಅವಳು ಸತೀಶ ಶುಗರ್ಸ ಅವಾರ್ಡ್ಸ ಕಾರ್ಯಕ್ರಮ ಸಾಂಸ್ಕೃತಿಕ ಸಂಭ್ರಮ ಆಗಲಾರದೆ ಹಲವಾರು ವಿದ್ಯಾರ್ಥಿಗಳ ಕನಸುಗಳಿಗೆ ದಾರಿ ದೀಪವಾಗಿದ್ದು, ಪ್ರತಿಯೊಬ್ಬ ಕಲಾವಿದರ ಕನಸು ಈ ವೇದಿಕೆಯಿಂದ ಸಹಕಾರವಾಗಲಿ ಎಂದು ಐಶ್ವರ್ಯ ಹಾರೈಸಿದಳು.
ಅತಿಥಿಗಳಾಗಿ ಪಾಲ್ಗೊಂಡಿದ್ದ ತಹಶೀಲ್ದಾರ ಡಾ. ಮೋಹನ ಭಸ್ಮೆ ಅವರು ಮಾತನಾಡಿ, ಸತೀಶ ಶುಗರ್ಸ ಅವಾರ್ಡ್ಸ ವಿದ್ಯಾರ್ಥಿಗಳಿಗೆ ಶಕ್ತಿಯಾಗಿ ಪರಿಣಮಿಸಿದೆ. ಇದು ಸರ್ವ ಸಾಂಸ್ಕೃತಿಕ ಅಭಿಯಾನವಾಗಿ ನಾಡಿನಲ್ಲಿ ಪಸರಿಸಿದೆ. ಪಾಲಕರು ತಮ್ಮ ಮಕ್ಕಳು ಈ ವೇದಿಕೆಯಿಂದ ವಂಚಿತವಾಗದಂತೆ ನೋಡಿಕೊಂಡು ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಮನೋಬಲವನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಗೋಕಾಕ ಮತ್ತು ಮೂಡಲಗಿ ತಾಲ್ಲೂಕುಗಳ ವಿದ್ಯಾರ್ಥಿಗಳನ್ನು ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಮಹನೀಯರನ್ನು ಸತ್ಕರಿಸಿ, ಪ್ರೋತ್ಸಾಹಿಸಿ, ಗೌರವಿಸಲಾಯಿತು.
ತದನಂತರ ಪ್ರಾಢಶಾಲಾ ವಿಭಾಗದ ಜಾನಪದ ಗಾಯನ, ಪ್ರಾಥಮಿಕ ವಿಭಾಗದ ಗಾಯನ, ಪ್ರಾಥಮಿಕ ಶಾಲಾ ವಿಭಾಗದ ಸಮೂಹ ನೃತ್ಯ ಹಾಗೂ ಕಾಲೇಜು ವಿಭಾಗದ ಸಮೂಹ ನೃತ್ಯಗಳು ಜರುಗಿದವು.
ಈ ಸಂದರ್ಭದಲ್ಲಿ ಬಿಇಓ ಪ್ರಕಾಶ ಹಿರೇಮಠ, ಡಿವೈಎಸ್ಪಿ ರವಿ ನಾಯಿಕ, ಸಿಪಿಐಗಳಾದ ಸುರೇಶಬಾಬು ಮತ್ತು ಶ್ರೀಶೈಲ ಬ್ಯಾಕೂಡ, ಎಸ್.ಎಸ್.ಎ. ಅಕ್ಯಾಡೆಮಿ ಪ್ರಾಚಾರ್ಯ ಪ್ರಕಾಶ ಲಕ್ಷಟ್ಟಿ, ರಿಯಾಜ ಚೌಗಲಾ ಉಪಸ್ಥಿತರಿದ್ದರು.
ಶಿಕ್ಷಕ ಎ.ಜಿ.ಕೋಳಿ ನಿರೂಪಿಸಿ, ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.