ಸವದತ್ತಿ: ತಾಲ್ಲೂಕಿನಲ್ಲಿ 16,382 ಹೆಕ್ಟೇರ್ ಬೆಳೆಯನ್ನು ಮಳೆ ಆಹುತಿ ಪಡೆದಿದೆ. ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಗಳಿಂದ ಜಂಟಿ ಬೆಳೆ ಹಾನಿ ಸಮೀಕ್ಷೆ ನಡೆಸಲಾಗಿದೆ. ಹೆಸರು, ಹತ್ತಿ, ಗೋವಿನಜೋಳ, ಉದ್ದು, ಸೋಯಾಅವರೆ, ಈರುಳ್ಳಿ, ಕಬ್ಬು ಬೆಳೆ ಸಹಿತ ಒಟ್ಟು 70,749 ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆಯಾಗಿದೆ.
ಅತಿವೃಷ್ಟಿಯಿಂದ ಹೆಸರು, ಉದ್ದು, ಸೋಯಾಅವರೆಗೆ ಅತಿ ಹೆಚ್ಚು ಹಾನಿಯಾಗಿದೆ. ಗೋವಿನಜೋಳ ಮತ್ತು ಹತ್ತಿ ಬೆಳೆಗಳ ಹಾನಿ ಪ್ರಮಾಣ ಕಡಿಮೆಯಿದೆ. ಜೂನ್ 1ರಿಂದ ಸೆ.21ರವರೆಗೆ 282 ಮಿ.ಮೀ. ಮಳೆ ಸುರಿಯಬೇಕಿತ್ತು. ಆದರೆ ಶೇ 21ರಷ್ಟು ಹೆಚ್ಚಾಗಿ ಅಂದರೆ 482 ಮಿ.ಮೀ. ಮಳೆ ಸುರಿದಿದೆ. ಸೆ.1ರಿಂದ ಬುಧವಾರದವರೆಗೆ 68 ಮಿ.ಮೀ. ಆಗಬೇಕಿತ್ತು. ಆದರೆ, 136 ಮಿ.ಮೀ. ಸುರಿದಿದೆ. ಆಗಾಗ ಮತ್ತೆ ಮಳೆಯಾಗುತ್ತಿರುವುದು ಅನ್ನದಾತರ ಆತಂಕ ಮತ್ತಷ್ಟು ಹೆಚ್ಚಿಸಿದೆ.
***
4 ಎಕರೆಯಲ್ಲಿ ಬೆಳೆದ ಈರುಳ್ಳಿ ಅತಿಯಾದ ಮಳೆಯಿಂದ ಕೊಳೆತಿದೆ. ಸಾಲ ಉಳಿದಿದೆ, ಭವಿಷ್ಯಕ್ಕೆ ಭಗವಂತನೆ ಗತಿ ಎನ್ನುವಂತಹ ಸ್ಥಿತಿ ಬಂದಿದೆ
-ಫಕ್ಕೀರಪ್ಪ ಬನಚೋಡಿ, ಕುರುವಿನಕೊಪ್ಪ ರೈತ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.