ಸವದತ್ತಿ: ತಾಲ್ಲೂಕಿನಾದ್ಯಂತ ಕಳೆದ ನಾಲ್ಕಾರು ದಿನಗಳಿಂದ ಅಪಾರ ಪ್ರಮಾಣದ ಮಳೆ ಸುರಿದ ಪರಿಣಾಮ ರೈತರ ಜಮೀನಿನಲ್ಲಿ ಬೆಳೆದ ಬೆಳೆ ಭಾಗಶಃ ಹಾನಿಯಾದ ಕುರಿತು ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಗಳಿಂದ ಬುಧವಾರ ಜಂಟಿ ಸಮೀಕ್ಷೆ ನಡೆಸಲಾಯಿತು.
ಚಿಕ್ಕಉಳ್ಳಿಗೇರಿ, ಹಿರೇಉಳ್ಳಿಗೇರಿ, ಅಸುಂಡಿ ಹಾಗೂ ಸವದತ್ತಿ ಸ್ಥಳೀಯವಾಗಿ ಹಲವು ಪ್ರದೇಶಗಳಲ್ಲಿ ಹೆಸರು ಮತ್ತು ಉದ್ದು ಬೆಳೆ ನಾಶವಾದ ಕುರಿತು ಪರಿಶೀಲನೆ ನಡೆಸಲಾಯಿತು. ಭೇಟಿ ನೀಡಿದ ಕೆಲ ಕ್ಷೇತ್ರದಲ್ಲಿ ಹೆಸರು ಬೆಳೆ ಮೊಳಕೆಯೊಡೆದಿದ್ದು ಹಲವೆಡೆ ಕಾಯಿಯಲ್ಲಿ ನೀರು ತುಂಬಿದೆ. ಶೇ. 60 ಕ್ಕಿಂತ ಹೆಚ್ಚು ಬೆಳೆಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ಅತಿವೃಷ್ಟಿಯಿಂದಾದ ಬೆಳೆ ಹಾನಿ ಸಮೀಕ್ಷೆ ನಡೆಸಲು ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಗಳಿಂದ ತಂಡ ರಚಿಸಿ ಜಂಟಿ ಸಮೀಕ್ಷೆ ನಡೆಸಲಾಗಿದೆ. ಇದೀಗ ನಾಲ್ಕಾರು ಗ್ರಾಮ ಸಮೀಕ್ಷೆ ನಡೆದಿದೆ. ತಾಲೂಕಿನ ಸಮಗ್ರ ಹಾನಿ ಪರಿಶೀಲಿಸಿ ವರದಿ ನಂತರ ಮುಂದಿನ ಕ್ರಮಕೈಕೊಳ್ಳಲಾಗುವದೆಂದು ತಹಶೀಲ್ದಾರ್ ಎಂ.ಎನ್. ಹೆಗ್ಗಣ್ಣವರ ತಿಳಿಸಿದರು.
ಎಸ್.ವಿ. ಪಾಟೀಲ, ಬೀರಪ್ಪ ಪ್ರಜೇರ, ಆರ್.ಐ. ಮುದಗಲ್ಲ, ರಾಮಚಂದ್ರ ಟೆಕ್ಕೆ ಹಾಗೂ ಇಲಾಖಾಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.