ADVERTISEMENT

2ಬಿ ಮೀಸಲಾತಿ ಮರುಸ್ಥಾಪಿಸಿ: ಎಸ್‌ಡಿಪಿಐ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2023, 14:41 IST
Last Updated 13 ಡಿಸೆಂಬರ್ 2023, 14:41 IST
ಬೆಳಗಾವಿಯ ಗಾಂಧಿನಗರದಲ್ಲಿ ಎಸ್‌ಡಿಪಿಐ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು
ಬೆಳಗಾವಿಯ ಗಾಂಧಿನಗರದಲ್ಲಿ ಎಸ್‌ಡಿಪಿಐ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು   

ಬೆಳಗಾವಿ: ಮುಸ್ಲಿಂ ಸಮುದಾಯದ 2ಬಿ ಮೀಸಲಾತಿಯನ್ನು ಮರುಸ್ಥಾಪಿಸಿ, ಮೀಸಲಾತಿ ಪ್ರಮಾಣವನ್ನು ಶೇ 8ಕ್ಕೆ ಹೆಚ್ಚಿಸುವಂತೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ವತಿಯಿಂದ ನಗರದಲ್ಲಿ ಬೃಹತ್‌ ಪ್ರತಿಭಟನೆ ಹಾಗೂ ಬೈಕ್‌ ರ್‍ಯಾಲಿ ನಡೆಸಲಾಯಿತು.

ಅಂಬೇಡ್ಕರ್‌ ಉದ್ಯಾನದಿಂದ ಜಾಥಾ ಆರಂಭಿಸಿದ ಯುವಕರು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಘೋಷಣೆ ಕೂಗಿದರು. ರಾಣಿ ಚನ್ನಮ್ಮ ವೃತ್ತ ಹಾಗೂ ಗಾಂಧಿ ನಗರದಲ್ಲಿ ರಸ್ತೆ ತಡೆ ನಡೆಸಿದರು. ಬೆಳಗಾವಿ ನಗರ ಪ್ರವೇಶಿಸುವ ಹೆದ್ದಾರಿ ಸ್ಥಳದಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದರಿಂದ ಸಂಚಾರ ಮಾರ್ಗ ಬದಲಾವಣೆ ಮಾಡಲಾಯಿತು. ಒಂದು ಗಂಟೆಗೂ ಹೆಚ್ಚು ಹೊತ್ತು ವಾಹನ ಸವಾರರು ಪರದಾಡಿದರು. ಈ ವೇಳೆ ಕೆಲವರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.

‘ಗಾಂಧಿನಗರದಿಂದ ಪ್ರತಿಭಟನಾ ರ‍್ಯಾಲಿ ನಡೆಸಲು ಅನುಮತಿ ಇಲ್ಲ. 10 ಮುಖಂಡರು ವಾಹನದಲ್ಲಿ ತೆರಳಿ ಮಾಲಾರ್ಪಣೆ ಮಾಡಿ ನಂತರ, ವಾಹನ ಮೂಲಕ ಸುವರ್ಣ ವಿಧಾನಸೌಧದವರೆಗೆ ತೆರಳಬಹುದು’ ಎಂದು ಪೊಲೀಸರು ಸಮಾಜಾಯಿಷಿ ನೀಡಿದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರಾರರು, ನಮ್ಮದು ಪ್ರತಿಭಟನೆ ಅಲ್ಲ ಜಾಗೃತಿ ರ್‍ಯಾಲಿ ಎಂದು ಪಟ್ಟು ಹಿಡಿದರು. ನಂತರ ಪೊಲೀಸರು ಎಲ್ಲರನ್ನೂ ಬಸ್ಸಿನಲ್ಲಿ ಹತ್ತಿಸಿ ಸುವರ್ಣಸೌಧಕ್ಕೆ ಕರೆದೊಯ್ದರು.

ADVERTISEMENT

ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ, ಅಶ್ರಫ್‌, ರಿಯಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.