
ಹಾರೂಗೇರಿ: ‘ಮನುಷ್ಯನು ಯಜ್ಞ, ದಾನ, ತಪ, ಕರ್ಮ ಮಾಡುವ ಮೂಲಕ ಅಜ್ಞಾನ ಕಳೆದು, ಪರಮಾತ್ಮನ ಸಾನ್ನಿಧ್ಯದಲ್ಲಿ ಜನ್ಮ ಸಾರ್ಥಕ ಮಾಡಿಕೊಳ್ಳಬೇಕು’ ಎಂದು ಹಾರೂಗೇರಿ, ಇಂಚಲ ಮಠಗಳ ಪೀಠಾಧ್ಯಕ್ಷ ಶಿವಾನಂದ ಭಾರತಿ ಸ್ವಾಮೀಜಿ ನುಡಿದರು.
ಪಟ್ಟಣದ ಚನ್ನವೃಷಭೇಂದ್ರ ದೇವರ ಕೊಂಡಜ್ಜನ ಲೀಲಾ ಮಠದ ಶಿವಾನಂದ ಭಾರತಿ ಸಭಾಭವನದಲ್ಲಿ 100ನೇ ವರ್ಷದ ಮಹಾಶಿವರಾತ್ರಿ ಸಪ್ತಾಹ ಹಾಗೂ ‘ಓಂ ನಮಃ ಶಿವಾಯ’ ತಾರಕ ಮಂತ್ರದ ಶತಮಾನೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಸೋಮವಾರ ಶೀರ್ವಚನ ನೀಡಿದರು.
‘ಯಾವುದೇ ಕೆಲಸದ ಮೇಲೆ ಶ್ರದ್ಧೆ, ಭಕ್ತಿಯಿಟ್ಟು ಮಾಡಿದರೆ ಒಳ್ಳೆಯ ಫಲ ಕೊಡುತ್ತದೆ. ಅದರಂತೆ ಯಾವುದೇ ಫಲಾಪೇಕ್ಷೆ ಇಲ್ಲದೆ ಏಕಾಗ್ರತೆಯಿಂದ ಪ್ರತಿನಿತ್ಯ ಪರಮಾತ್ಮನನ್ನು ಧ್ಯಾನಿಸಿದರೆ ದೇವರ ಅನುಗ್ರಹವಾಗುತ್ತದೆ’ ಎಂದು ಬೀದರ್ ಚಿದಂಬರ ಆಶ್ರಮ ಸಿದ್ದಾರೂಢ ಮಠದ ಶಿವಕುಮಾರೇಶ್ವರ ಸ್ವಾಮಿಗಳು ಹೇಳಿದರು.
ಇದಕ್ಕೂ ಮುನ್ನ ಶಿವಾನಂದ ಭಾರತಿ ಸ್ವಾಮೀಜಿ ಚನ್ನವೃಷಭೇಂದ್ರ ಅಜ್ಜನ ಶೀಲಾಮೂರ್ತಿಗೆ ಸುವರ್ಣ ಕಿರೀಟ ಧಾರಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಂಗಳ ವಾದ್ಯಗಳೊಂದಿಗೆ ರಥದಲ್ಲಿ ಶಿವಾನಂದ ಭಾರತಿ ಸ್ವಾಮೀಜಿ ಹಾಗೂ ವಿವಿಧ ರಾಜ್ಯಗಳಿಂದ ಆಗಮಿಸಿದ ಪೂಜ್ಯರೊಂದಿಗೆ, ಚನ್ನವೃಷಭೇಂದ್ರರ ಭಾವಚಿತ್ರದ ಮೆರವಣಿಗೆ ಜರುಗಿತು. ಶಿವನ ಹಾಗೂ ವಿವಿಧ ವೇಷ ಭೂಷಣ ತೊಟ್ಟ ಮಕ್ಕಳು ಆಕರ್ಷಣೆಯ ಕೇಂದ್ರವಾದರು.
2,000ಕ್ಕೂ ಅಧಿಕ ಕುಂಭ ಹೊತ್ತ ಮಹಿಳೆಯರು ಅಂಬಲಿ ಪ್ರಸಾದವನ್ನು ಅರ್ಪಿಸಿದರು. ಕಾರ್ಯಕ್ರಮದಲ್ಲಿ ಸಾಧನಾ ಸದನ ಹರಿದ್ವಾರ ಮುಂಬೈಯ ಮಹಾಮಂಡಲೇಶ್ವರ ದಿವ್ಯಾನಂದ ಗೂರುಜಿ, ಸನ್ಯಾಸ ಆಶ್ರಮ ಋಷಿಕೇಶ ಮಹಾಮಂಡಲೇಶ್ವರ ಅಭಿಷೇಕ ಚೈತನ್ಯಗಿರಿ ಮಹಾರಾಜ, ಹುಕ್ಕೇರಿಯ ಪೂಜ್ಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಹೇಮಕೂಟ ಹಂಪಿಯ ವಿದ್ಯಾನಂದ ಭಾರತಿ ಸ್ವಾಮೀಜಿ, ಇಂಚಲದ ಪೂರ್ಣಾನಂದ ಭಾರತಿ ಸ್ವಾಮೀಜಿ, ಕಲಬುರ್ಗಿಯ ಲಕ್ಷ್ಮಿ ತಾಯಿ, ಗದಗದ ನೀಲಮ್ಮ ತಾಯಿ, ಅನಗವಾಡಿಯ ಅನಸೂಯಾ ತಾಯಿ, ಪರಮಾನಂದವಾಡಿಯ ಅಭಿನವ ಬ್ರಹ್ಮಾನಂದ ಸ್ವಾಮೀಜಿ, ಅಥಣಿಯ ಬಿ.ಎಂ. ಮುಜಾವರ ಸಾಹೇಬರು ಆಶೀರ್ವಚನ ನೀಡಿದರು.
ಮಾಜಿ ಶಾಸಕ ಪಿ.ರಾಜೀವ್, ಅಪ್ಪಾಸಾಬ ಕುಲಕರ್ಣಿ, ಶಿವಗೊಂಡ ಧರ್ಮಟ್ಟಿ, ಲಾಲಸಾಬ ಜಮಾದಾರ, ವಿಠ್ಠಲ ಬಂತಿ, ರಾಜು ಕರ್ಣವಾಡಿ, ಶ್ರೀಶೈಲ ಉಮರಾಣಿ, ಬಾಬು ಪರಮಗೌಡರ, ತಮ್ಮಾಣಿ ಕುರಿ, ರಾಘವೇಂದ್ರ ದೇಶಪಾಂಡೆ, ವಿಜಯ ಬಂತಿ ಹಲವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.