ಬೆಳಗಾವಿ: ‘ತಂದೆ (ಶಾಸಕ ಶ್ರೀಮಂತ ಪಾಟೀಲ) ಅವರನ್ನು ಯಾರೂ ಅಪಹರಿಸಿಲ್ಲ. ಅವರಿಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಅಣ್ಣ ಶ್ರೀನಿವಾಸನನ್ನು ಕರೆದುಕೊಂಡು, ಮುಂಬೈ ಆಸ್ಪತ್ರೆಗೆ ದಾಖಲಾಗಿದ್ದಾರೆ’ ಎಂದು ಅವರ ಎರಡನೇ ಪುತ್ರ ಯೋಗೇಶ ಪಾಟೀಲ ಪೊಲೀಸರಿಗೆ ತಿಳಿಸಿದ್ದಾರೆ.
ನೆರೆಯ ಮಹಾರಾಷ್ಟ್ರದ ಸಾಂಗ್ಲಿಯಲ್ಲಿರುವ ತಮ್ಮ ನಿವಾಸಕ್ಕೆ ಗುರುವಾರ ಸಂಜೆ ಭೇಟಿ ನೀಡಿದ ಅಥಣಿ ಹಾಗೂ ಚಿಕ್ಕೋಡಿ ಪೊಲೀಸರಿಗೆ ಅವರು ಈ ಮಾಹಿತಿ ನೀಡಿದರು.
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸುವ ಸಂದರ್ಭದಲ್ಲಿ ಗೈರಾಗಿದ್ದ ಶಾಸಕ ಶ್ರೀಮಂತ ಪಾಟೀಲ ಅವರನ್ನು ಬಿಜೆಪಿಯವರು ಅಪಹರಿಸಿದ್ದಾರೆ ಎಂದು ಕಾಂಗ್ರೆಸ್ ಶಾಸಕರು ಆರೋಪಿಸಿದ್ದರು. ಇದರ ಸತ್ಯಾಸತ್ಯತೆ ಪರಿಶೀಲಿಸಲು ಪೊಲೀಸರು ಭೇಟಿ ನೀಡಿದ್ದರು.
‘ಅವರಿಗೆ ಆಗಾಗ ಎದೆನೋವು ಕಾಣಿಸಿಕೊಳ್ಳುತ್ತದೆ. ಆಗ ಅವರು ಮುಂಬೈನಲ್ಲಿರುವ ಕುಟುಂಬದ ವೈದ್ಯರೊಬ್ಬರಿಗೆ ತೋರಿಸುತ್ತಾರೆ. ಅದೇ ರೀತಿ ಈ ಸಲವೂ ಅವರಿಗೆ ತೋರಿಸಲು ಹೋಗಿದ್ದಾರೆ. ಅವರ ಜೊತೆ ಅಣ್ಣ, ತಾಯಿ ಹಾಗೂ ಇತರ ಕುಟುಂಬದ ಸದಸ್ಯರು ಕೂಡ ಇದ್ದಾರೆ. ಅವರನ್ನು ಯಾರೂ ಅಪಹರಿಸಿಲ್ಲ. ಅವರು ನಮ್ಮ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ’ ಎಂದು ವಿವರಣೆ ನೀಡಿದರು.
ದೂರು ನೀಡಿಲ್ಲ: ‘ಶಾಸಕರ ಅಪಹರಣವಾಗಿದೆ ಎಂದು ವಿಧಾನಸಭೆಯಲ್ಲಿ ಚರ್ಚೆಯಾಗಿದೆ ಹೊರತು, ನಮಗೆ ಯಾರೂ ದೂರು ನೀಡಿಲ್ಲ. ಮುಂಜಾಗ್ರತಾ ಕ್ರಮವಾಗಿ ಶಾಸಕರ ಮನೆಗೆ ಭೇಟಿ ನೀಡಿರುವ ಸ್ಥಳೀಯ ಪೊಲೀಸರು, ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದಾರೆ. ಅಪಹರಣವಾಗಿಲ್ಲವೆಂದು ಅವರ ಪುತ್ರ ಹೇಳಿಕೆ ನೀಡಿದ್ದಾರೆ’ ಎಂದು ಐಜಿಪಿ (ಉತ್ತರ ವಲಯ) ಡಾ.ರಾಘವೇಂದ್ರ ಸುಹಾಸ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.