ಬೆಳಗಾವಿ ತಾಲ್ಲೂಕಿನ ಕೆ.ಕೆ.ಕೊಪ್ಪ ಗುಡ್ಡದ ಮೇಲೆ ವೆಂಕಟೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಸಚಿವರಾದ ರಾಮಲಿಂಗಾರೆಡ್ಡಿ, ಎಚ್.ಕೆ.ಪಾಟೀಲ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು. ಈರಣ್ಣಾ ಕಡಾಡಿ, ಲಕ್ಷ್ಮೀ ಹೆಬ್ಬಾಳಕರ ಮತ್ತಿತರರು ಚಿತ್ರದಲ್ಲಿದ್ದಾರೆ
ಬೆಳಗಾವಿ: ‘ರಡ್ಡಿ ಸಮುದಾಯದ ನಾಯಕರು ಇಡೀ ಸಮಾಜದ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂಥ ಶಿಕ್ಷಣ ಮತ್ತು ಕೌಶಲ ಒದಗಿಸುವ ಸಂಸ್ಥೆಗಳನ್ನು ಸ್ಥಾಪಿಸಬೇಕು’ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಹೇಳಿದರು.
ತಾಲ್ಲೂಕಿನ ಕೆ.ಕೆ.ಗುಡ್ಡದ ಮೇಲೆ ಶುಕ್ರವಾರ ಹಮ್ಮಿಕೊಂಡಿದ್ದ ವೆಂಕಟೇಶ್ವರ ದೇವಸ್ಥಾನ, ಹೇಮರಡ್ಡಿ ಮಲ್ಲಮ್ಮ ಧ್ಯಾನ ಮಂದಿರ ಮತ್ತು ಕಲ್ಯಾಣ ಮಂಟಪ ನಿರ್ಮಾಣಕ್ಕೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ರಡ್ಡಿ ಸಮುದಾಯದ ಜನರು ವಿದ್ಯಾವಂತರು, ಅಧಿಕಾರಸ್ಥರು ಮತ್ತು ಆರ್ಥಿಕವಾಗಿ ಸದೃಢತೆ ಹೊಂದಿದವರಿದ್ದೀರಿ. ಸಮಾಜ ನಿಮ್ಮಿಂದ ಬಹಳ ಅಪೇಕ್ಷೆಪಡುತ್ತದೆ. ಹಾಗಾಗಿ ಇಲ್ಲಿ ದೇವಸ್ಥಾನ, ಕಲ್ಯಾಣಮಂಟಪ ನಿರ್ಮಿಸುವ ಜತೆಗೆ, ಸಮಾಜದ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ಮಾಡಲು ಶಿಕ್ಷಣ ಸಂಸ್ಥೆಗಳನ್ನು ಕಟ್ಟಬೇಕು. ಆಗ ನಾವು ಗೆಲುವು ಸಾಧಿಸಿದಂತೆ’ ಎಂದು ಅಭಿಪ್ರಾಯಪಟ್ಟರು.
‘ಬೆಳಗಾವಿ, ಧಾರವಾಡ ಮತ್ತು ಬೆಂಗಳೂರಿನಲ್ಲಿ ಯುಪಿಎಸ್ಸಿ ಪರೀಕ್ಷೆಗಳಿಗೆ ತರಬೇತಿ ನೀಡಲು ಅವಕಾಶವಿದೆ. ಸಮಾಜಕ್ಕೆ ತಾಂತ್ರಿಕ ಮತ್ತು ಕೌಶಲ ತರಬೇತಿ ಸಂಸ್ಥೆಗಳ ಅಗತ್ಯವಿದೆ. ಹಾಗಾಗಿ ಈ ದೇವಾಲಯದಲ್ಲಿ ದೇವರ ವಿಗ್ರಹ ಪ್ರತಿಷ್ಠಾಪನೆಯಾಗುವ ಹೊತ್ತಿಗೆ, ಶಿಕ್ಷಣ ಸಂಸ್ಥೆಗಳ ಸ್ಥಾಪನೆಯನ್ನು ನಾವು ನಿರೀಕ್ಷಿಸುತ್ತೇವೆ’ ಎಂದು ಹೇಳಿದರು.
ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ‘ಸಮುದಾಯದಿಂದ ಜನಸ್ನೇಹಿ ಕಾರ್ಯಕ್ರಮಗಳು ನಡೆಯಬೇಕಿದೆ. ಉನ್ನತ ಶಿಕ್ಷಣ ಪಡೆಯುತ್ತಿರುವ ಯುವಕ, ಯುವತಿಯರಿಗೆ ಹಾಸ್ಟೆಲ್ಗಳ ಅಗತ್ಯವಿದೆ. ಅದನ್ನು ಸ್ಥಾಪಿಸಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ, ‘ರಡ್ಡಿ ಸಮುದಾಯವು ಸಾಮರಸ್ಯಕ್ಕೆ ಹೆಸರಾಗಿದೆ. ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ವೆಂಕಟೇಶ್ವರ ದೇವಸ್ಥಾನ ನಿರ್ಮಿಸುತ್ತಿರುವುದು ನನ್ನ ಅದೃಷ್ಟ. ಈ ಕಾಮಗಾರಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ. ಇದು ನನ್ನದೇ ಸಮುದಾಯದ ಕಾರ್ಯವೆಂದು ತಿಳಿದು, ಯಾವ ಕೊರತೆಯಾಗದಂತೆ ನೋಡಿಕೊಳ್ಳುತ್ತೇನೆ’ ಎಂದರು.
‘ಬೆಳಗಾವಿ ನಗರ ಈಗ ವೇಗವಾಗಿ ಬೆಳೆಯುತ್ತಿದೆ. ಈ ದೇವಾಲಯವು ಪ್ರವಾಸೋದ್ಯಮ ಆಕರ್ಷಣೆಗಳಿಗೆ ಸೇರ್ಪಡೆಯಾಗಲಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿದರೂ ಸಹಕಾರ ನೀಡುತ್ತೇನೆ’ ಎಂದು ಭರವಸೆ ನೀಡಿದರು.
‘ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ 140 ದೇವಸ್ಥಾನ ಅಭಿವೃದ್ಧಿಪಡಿಸುತ್ತಿದ್ದೇನೆ. ಸಚಿವ ಎಚ್.ಕೆ.ಪಾಟೀಲ ಅವರು ಸವದತ್ತಿ ಯಲ್ಲಮ್ಮ ಕ್ಷೇತ್ರದ ಅಭಿವೃದ್ಧಿಗೆ ಪ್ರಾಧಿಕಾರ ರಚಿಸಿ, ಕೇಂದ್ರ ಸರ್ಕಾರದಿಂದ ₹110 ಕೋಟಿ ಅನುದಾನ ತಂದಿದ್ದಾರೆ. ರಾಜಹಂಸಗಡ ಅಭಿವೃದ್ಧಿಗೂ ಈಗಾಗಲೇ ₹1 ಕೋಟಿ ಮಂಜೂರು ಮಾಡಿದ್ದು, ಇನ್ನೂ ಹೆಚ್ಚಿನ ಸಹಾಯ ನೀಡುವ ವಿಶ್ವಾಸವಿದೆ’ ಎಂದರು.
ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ‘ಈ ದೇವಸ್ಥಾನ ನಿರ್ಮಿಸಲು ರಾಜ್ಯಸಭಾ ನಿಧಿಯಿಂದ ₹25 ಲಕ್ಷ ನೀಡುತ್ತೇನೆ. ಇದಲ್ಲದೆ, ₹1 ಲಕ್ಷ ನೀಡುತ್ತೇನೆ’ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಹರಿಹರದ ಎರೆಹೊಸಳ್ಳಿಯ ರೆಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ, ‘ಈ ದೇವಸ್ಥಾನ ಕಟ್ಟುವುದು ರಡ್ಡಿ ಸಮುದಾಯದ ಕನಸಾಗಿತ್ತು. ಈ ದೇವಸ್ಥಾನ ನಿರ್ಮಾಣದಿಂದ ಆತ್ಮಶುದ್ಧಿಯಾಗುತ್ತದೆ. ಆದರೆ, ಶಿಕ್ಷಣ ಸಂಸ್ಥೆ ಹುಟ್ಟು ಹಾಕುವುದರಿಂದ ಬೌದ್ಧಿಕವಾಗಿ ಬೆಳೆಯಲು ಸಾಧ್ಯವಿದೆ. ಇದಕ್ಕೆ ಆದ್ಯತೆ ಕೊಡಿ’ ಎಂದರು.
ಶಾಸಕ ಆಸಿಫ್ ಸೇಠ್, ಮಾಜಿ ಶಾಸಕರಾದ ಡಿ.ಆರ್.ಪಾಟೀಲ, ಆರ್.ವಿ.ಪಾಟೀಲ, ಇಂದಿರಾಬಾಯಿ ಮಳಲಿ, ರೆಡ್ಡಿ ಸಂಘದ ಮತ್ತು ಬಾಲಾಜಿ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ರಾಮಣ್ಣ ಮುಳ್ಳೂರ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.