ADVERTISEMENT

‘ಸಿ.ಎಂ. ಸತೀಶ ಜಾರಕಿಹೊಳಿ’ ಫೇಸ್‌ಬುಕ್‌ನಲ್ಲಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2019, 14:13 IST
Last Updated 2 ಫೆಬ್ರುವರಿ 2019, 14:13 IST
   

ಬೆಳಗಾವಿ: ಅರಣ್ಯ ಸಚಿವ ಸತೀಶ ಜಾರಕಿಹೊಳಿ ಅವರ ಅಭಿಮಾನಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ‘# ನಮ್ಮ ಸಿ.ಎಂ ಸತೀಶ ಜಾರಕಿಹೊಳಿ...’ ಅಭಿಯಾನವನ್ನು ಆರಂಭಿಸಿದ್ದಾರೆ. ಕರ್ನಾಟಕ ಸತೀಶ ಜಾರಕಿಹೊಳಿ ಯುವಸೇನೆ ಸಂಘಟನೆಯು ತನ್ನ ಫೇಸ್‌ಬುಕ್‌ನಲ್ಲಿ ಇಂತಹದೊಂದು ಪೋಸ್ಟ್‌ ಹಾಕಿದೆ.

‘ಸಿದ್ದರಾಮಯ್ಯ ನಮ್ಮ ಸಿ.ಎಂ ಅಲ್ಲ. ಸತೀಶ ನಮ್ಮ ಸಿ.ಎಂ’, ‘ನಮ್ಮ ಸಿ.ಎಂ ಸತೀಶ ಜಾರಕಿಹೊಳಿ ಮಾತ್ರ... ಇಂದು, ಮುಂದು, ಎಂದೆಂದೂ...’ ಎನ್ನುವ ಬರಹಗಳನ್ನು ಹಾಕಲಾಗಿದೆ. ಈ ಪೋಸ್ಟ್‌ಗೆ 244 ಜನರು ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ.

ಕಾಲಕೂಡಿ ಬರಬೇಕು:

ADVERTISEMENT

ಅಭಿಯಾನದ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಸತೀಶ ಜಾರಕಿಹೊಳಿ, ‘ರಾಜ್ಯದ ಮುಖ್ಯಮಂತ್ರಿ ಆಗುವ ಆಸೆ ನನಗೂ ಇದೆ. ಅದಕ್ಕೆ ಕಾಲ ಕೂಡಿಬರಬೇಕು. ಪಕ್ಷದ ಹೈಕಮಾಂಡ್, ಶಾಸಕರು, ಮುಖಂಡರು ಈ ಬಗ್ಗೆ ನಿರ್ಧರಿಸುತ್ತಾರೆ. ನೋಡೋಣ’ ಎಂದು ಹೇಳಿದರು.

ಲಕ್ಷ್ಮಿ ಹೆಬ್ಬಾಳಕರ ಸಹೋದರನ ಪರ ಪ್ರಚಾರ:

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಿಂದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ಅವರನ್ನು ಕಣಕ್ಕಿಳಿಸಬೇಕೆಂದು ಫೇಸ್‌ಬುಕ್‌ನಲ್ಲಿ ಕೆಲವರು ಪ್ರಚಾರ ಕೈಗೊಂಡಿದ್ದಾರೆ.

ಕ್ಷೇತ್ರದಲ್ಲಿ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇದೇ ಸಮುದಾಯಕ್ಕೆ ಸೇರಿದ ಚನ್ನರಾಜ ಹಟ್ಟಿಹೊಳಿ ಅವರಿಗೆ ಟಿಕೆಟ್‌ ನೀಡಬೇಕೆಂದು ‘ಲಕ್ಷ್ಮಿ ಹೆಬ್ಬಾಳಕರ ಅಭಿಮಾನಿಗಳ ಬಳಗ’ವು ತನ್ನ ಫೇಸ್‌ಬುಕ್‌ನಲ್ಲಿ ಅಭಿಯಾನ ಆರಂಭಿಸಿದೆ.

ಹಾಲಿ ಈ ಕ್ಷೇತ್ರದ ಸಂಸದರಾಗಿರುವ ಬಿಜೆಪಿಯ ಸುರೇಶ ಅಂಗಡಿ ಅವರು ಕೂಡ ಲಿಂಗಾಯತರಾಗಿದ್ದು, ಇವರನ್ನು ಸಮರ್ಥವಾಗಿ ಎದುರಿಸಲು ಲಿಂಗಾಯತ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು ಎನ್ನುವ ಒತ್ತಾಯ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.