ADVERTISEMENT

ಸವದತ್ತಿ: ‘ಉದ್ಯೋಗ ಖಾತ್ರಿ’ಯಲ್ಲಿ ಶಾಲೆಗೆ ಮೈದಾನ

ಗಮನಸೆಳೆದ ಮುಗಳಿಹಾಳ ಗ್ರಾಮ ಪಂಚಾಯಿತಿ ಕ್ರಮ

ಎಂ.ಮಹೇಶ
Published 24 ಡಿಸೆಂಬರ್ 2020, 19:30 IST
Last Updated 24 ಡಿಸೆಂಬರ್ 2020, 19:30 IST
ಸವದತ್ತಿ ತಾಲ್ಲೂಕಿನ ಮುಗಳಿಹಾಳ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿರ್ಮಿಸಿರುವ ಆಟದ ಮೈದಾನ
ಸವದತ್ತಿ ತಾಲ್ಲೂಕಿನ ಮುಗಳಿಹಾಳ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿರ್ಮಿಸಿರುವ ಆಟದ ಮೈದಾನ   

ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲ್ಲೂಕಿನ ಮುಗಳಿಹಾಳ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸರ್ಕಾರಿ ಪ್ರೌಢಶಾಲೆಗೆ ಆಟದ ಮೈದಾನ ನಿರ್ಮಿಸಿರುವುದು ಗಮನಸೆಳೆದಿದೆ.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಾಮಾನ್ಯವಾಗಿ ರಸ್ತೆ, ಚರಂಡಿ, ಕೃಷಿ ಹೊಂಡ, ಬದುಗಳ ನಿರ್ಮಾಣ ಮೊದಲಾದವುಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಆದರೆ, ಮುಗಳಿಹಾಳದಲ್ಲಿ ಮಕ್ಕಳು ದೈಹಿಕ ಸದೃಢತೆ ಕಾಪಾಡಿಕೊಳ್ಳಲು ಅನುಕೂಲವಾಗುವಂತೆ ಮೈದಾನ ಅಭಿವೃದ್ಧಿಪಡಿರುವುದು ವಿಶೇಷವಾಗಿದೆ. ಸಮುದಾಯಕ್ಕೆ ಆಸ್ತಿ ನಿರ್ಮಿಸುವ ಈ ಕಾರ್ಯ ಎರಡು ತಿಂಗಳಿಂದ ಪ್ರಗತಿಯಲ್ಲಿದ್ದು, ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿವೆ. ಶಾಲೆ ಪುನರಾರಂಭಗೊಳ್ಳುವ ವೇಳೆಗೆ ಮೈದಾನವು ಸಂಪೂರ್ಣವಾಗಿ ಸಿದ್ಧವಾಗಲಿದ್ದು, ಮಕ್ಕಳನ್ನು ಆಕರ್ಷಿಸಲಿದೆ.

‘200 ಮೀ. ಮತ್ತು 100 ಮೀ. ಟ್ರ್ಯಾಕ್, ಕೊಕ್ಕೊ ಮೈದಾನ, ಬಾಲಕರು ಹಾಗೂ ಬಾಲಕಿಯರಿಗೆ ಪ್ರತ್ಯೇಕವಾಗಿ ವಾಲಿಬಾಲ್‌ ಮತ್ತು ಥ್ರೋಬಾಲ್ ಅಂಕಣ, ಕಬ್ಬಡ್ಡಿ ಅಂಕಣ, ಎತ್ತರ ಜಿಗಿತ ಹಾಗೂ ಉತ್ತರ ಜಿಗಿತ ಅಭ್ಯಾಸಕ್ಕೆ ಪ್ರತ್ಯೇಕ ಸ್ಥಳ ನಿಗದಿಪಡಿಸಲಾಗಿದೆ. ಟ್ರ್ಯಾಕ್‌, ಕೊ ಕ್ಕೊ ಹಾಗೂ ವಾಲಿಬಾಲ್‌ ಅಂಕಣದ ಕಂಬಗಳಿಗೆ ಬಣ್ಣ ಬಳಿದರೆ ಕಾಮಗಾರಿ ಪೂರ್ಣಗೊಳ್ಳಲಿದೆ. ಶಾಲಾ ಮಕ್ಕಳಿಗೆ ಹಾಗೂ ಸ್ಥಳೀಯ ಯುವಕರಿಗೆ ಕ್ರೀಡಾ ಚಟುವಟಿಕೆಗಳಿಗೆ ಮತ್ತು ವ್ಯಾಯಾಮಕ್ಕೆ ಅನುಕೂಲವಾಗಲೆಂದು ಮೈದಾನ ನಿರ್ಮಿಸಲಾಗಿದೆ’ ಎಂದು ಪಿಡಿಒ ಅಮಿತ್ ಯಲ್ಲಪ್ಪ ನಾಯಿಕ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಮೈದಾನಕ್ಕಾಗಿ ಸ್ಥಳೀಯರಿಂದಲೂ ಬೇಡಿಕೆ ಇತ್ತು. ₹ 7 ಲಕ್ಷ ವೆಚ್ಚದ ಕಾರ್ಯಕ್ರಮ ಇದಾಗಿದೆ. ಸ್ಥಳೀಯರೇ ಆದ 35ರಿಂದ 40 ಮಂದಿ ಕೂಲಿಕಾರ್ಮಿಕರು ನಿತ್ಯ ಕೆಲಸ ಮಾಡುತ್ತಿದ್ದಾರೆ. ಈವರೆಗೆ 503 ಮಾನವ ದಿನಗಳನ್ನು ಸೃಜಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘1999ರಲ್ಲಿ ಆರಂಭವಾದ ಈ ಪ್ರೌಢಶಾಲೆಗೆ ಮುಗಳಿಹಾಳ ಗ್ರಾಮದೊಂದಿಗೆ ಸುತ್ತಮುತ್ತಲಿನ ಮೆಳ್ಳಿಕೇರಿ, ದಾಸನಾಳ, ಅಕ್ಕಿಸಾಗರ, ಕೊಡ್ಲಿವಾಡ, ಗೋಣಕೊಪ್ಪ, ರಾಮದುರ್ಗ ತಾಲ್ಲೂಕಿನ ಬಾಗೋಜಿಕೊಪ್ಪ ಹಾಗೂ ಹಿರೇಕೊಪ್ಪ ಗ್ರಾಮಗಳ ಮಕ್ಕಳು ಬರುತ್ತಾರೆ. ಒಟ್ಟು 300 ವಿದ್ಯಾರ್ಥಿಗಳಿದ್ದಾರೆ. ಹಿಂದೆ ಇಲ್ಲಿ ಖಾಲಿ ಜಾಗವನ್ನು ಮೈದಾನವನ್ನಾಗಿ ಬಳಸಿಕೊಳ್ಳಲಾಗುತ್ತಿತ್ತು. ಈಗ, ಸುಸಜ್ಜಿತ ಮೈದಾನ ಸಿದ್ಧಗೊಂಡಿರುವುದರಿಂದ ಮಕ್ಕಳ ಆಟೋಟಕ್ಕೆ ಅನುಕೂಲವಾಗಲಿದೆ. ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಬಹುದಾಗಿದೆ’ ಎನ್ನುತ್ತಾರೆ ಅವರು.

***

ಗೋಪಾಲಗೌಡ ಗಂಗರೆಡ್ಡಿ ಎನ್ನುವವರು ತಾಯಿ ಹೆಸರಿನಲ್ಲಿ ಶಾಲೆಗೆ 3 ಎಕರೆ ದಾನವಾಗಿ ಕೊಟ್ಟಿದ್ದರು. ಹಿಂದೆ ಇದ್ದ ಮೈದಾನ ಸಮತಟ್ಟಾಗಿರಲಿಲ್ಲ. ನಿರ್ದಿಷ್ಟ ಅಂಕಣ ಇರಲಿಲ್ಲ. ಈಗ ಯೋಜಿತವಾಗಿ ನಿರ್ಮಿಸಿರುವುದರಿಂದ ಮಕ್ಕಳಿಗೆ ಅನುಕೂಲವಾಗಲಿದೆ

- ವಿಠ್ಠಲ ದಳವಾಯಿ, ಗ್ರಾಮಸ್ಥ, ಮುಗಳಿಹಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.