
ಬೆಳಗಾವಿ: ‘ಎಸ್ಎಸ್ಎಲ್ಸಿ ಮತ್ತು ಪಿಯು ಪರೀಕ್ಷೆಗಳು ಜೀವನದ ಅತ್ಯಂತ ಮಹತ್ವದ ಘಟ್ಟಗಳು. ಈ ನಿಟ್ಟಿನಲ್ಲಿ ಕಠಿಣ ಮಟ್ಟದ ಓದಿನಲ್ಲಿ ತೊಡಗಿಸಿಕೊಂಡು ಜೀವನದಲ್ಲಿ ಉನ್ನತ ಹುದ್ದೆಗೆ ಹೋಗುವ ಕನಸು ಕಾಣಬೇಕು’ ಎಂದು ಕಿರಣ ಗಣಾಚಾರಿ ಕರೆ ನೀಡಿದರು.
ಕೆಎಲ್ಇ ಸಂಸ್ಥೆಯ ಗಿಲಗಿಂಚಿ ಅರಟಾಳ ಪದವಿಪೂರ್ವ ಮಹಾವಿದ್ಯಾಲಯದ ಪ್ರೌಢಶಾಲಾ ವಿಭಾಗದ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಮತ್ತು ವಾರ್ಷಿಕ ಸ್ನೇಹ ಸಮ್ಮಿಲನದಲ್ಲಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳ ಭವಿಷ್ಯದ ಜೀವನವನ್ನು ಗಮನದಲ್ಲಿಟ್ಟು ಕೊಂಡು ಶಿಕ್ಷಕರು ಪ್ರತಿ ದಿನ ರಾತ್ರಿ 8 ಗಂಟೆಗೆ ಮತ್ತು ಬೆಳಗಿನ ಜಾವ 4 ಗಂಟೆಗೆ ಮಕ್ಕಳ ಶೈಕ್ಷಣಿಕ ಬೆಳವಣಿಗೆಗಳ ಬಗ್ಗೆ ವಿಚಾರಣೆ ನಡೆಸಿ ಅವರನ್ನು ಪ್ರೇರೇಪಿಸುತ್ತಿದ್ದಾರೆ. ಸ್ವಂತ ಮಕ್ಕಳನ್ನು ಸಹ ಈ ರೀತಿ ನೋಡದೆ ತಾವು ಕಲಿಸಿದ ವಿದ್ಯಾರ್ಥಿಗಳನ್ನು ತಿದ್ದುವಲ್ಲಿ ಶಿಕ್ಷಕರು ಮಾಡುತ್ತಿರುವ ಕೆಲಸ ಎಲ್ಲರ ಪ್ರಶಂಸೆಗೆ ಕಾರಣವಾಗಿದೆ’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಉಪ ಪ್ರಾಚಾರ್ಯ ಸಿ.ಪಿ.ದೇವಋಷಿ ಮಾತನಾಡಿದರು. ಪ್ರಾಚಾರ್ಯ ಡಿ.ಎಸ್.ಪವಾರ, ಶಾಲಾ ಪ್ರಧಾನಿ ಶ್ರೇಯಾ ಕುಂದರನಾಡ, ಹುಸೇನ ಪಠಾಣ ವೇದಿಕೆ ಮೇಲಿದ್ದರು.
ಶ್ರೀನಿಧಿ ಬೊಮ್ಮನ್ನವರ ಪ್ರಾರ್ಥಿಸಿದರು. ಎ.ಆರ್.ಪಾಟೀಲ ಸ್ವಾಗತಿಸಿದರು. ಎಸ್.ಜೆ.ಏಳುಕೋಟಿ ಪರಿಚಯಿಸಿದರು. ಒಕ್ಕೂಟದ ಅಧ್ಯಕ್ಷೆ ಎಸ್.ಬಿ.ಕೋರೆ ವರದಿ ವಾಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.