ಬೆಳಗಾವಿ: ‘ರೈತರು ಸಾವಯವ ಬೇಸಾಯ ಪದ್ಧತಿ ಅಳವಡಿಸಿಕೊಂಡರೆ ಮಿತ ವ್ಯಯ ಸಾಧಿಸಿ ಕೃಷಿಯನ್ನು ಲಾಭದಾಯಕ ಮಾಡಿಕೊಳ್ಳಬಹುದು’ ಎಂದು ಕೃಷಿ ಇಲಾಖೆ ತಾಂತ್ರಿಕ ವ್ಯವಸ್ಥಾಪಕ ರಾಜಶೇಖರ ಭಟ್ಟ ತಿಳಿಸಿದರು.
ತಾಲ್ಲೂಕಿನ ಸಾವಗಾಂವ ಗ್ರಾಮದಲ್ಲಿ ನಡೆದ ಭತ್ತದ ಬೆಳೆಯ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ರಸಗೊಬ್ಬರ ಹಾಗೂ ಕೀಟನಾಶಕಗಳ ಬೆಲೆ ಏರಿಕೆಯಾಗಿರುವ ಪ್ರಸಕ್ತ ದಿನಗಳಲ್ಲಿ ರೈತರು ನಿಧಾನವಾಗಿ ಸಾವಯವ ಕೃಷಿಯತ್ತ ವಾಲುವುದು ಅನಿವಾರ್ಯವಾಗಿದೆ. ಇದರಿಂದ, ಪರಿಸರ ಕಾಪಾಡಿದಂತಾಗುತ್ತದೆ’ ಎಂದರು.
ಪ್ರಗತಿಪರ ಕೃಷಿಕ ರಾಮಲಿಂಗ ಹಲಕರ್ಣಿಕರ ಸಾವಯವ ಪದ್ಧತಿಯಲ್ಲಿ ಭತ್ತದ ಬೇಸಾಯ ಹಾಗೂ ಕೀಟ ನಿರ್ವಹಣೆ ಕುರಿತು ತಿಳಿಸಿದರು. ಜೀವಾಮೃತ, ಸಸ್ಯಾಧಾರಿತ ಕೀಟನಾಶಕಗಳನ್ನು ತಯಾರಿಸುವ ವಿಧಾನವನ್ನು ಪ್ರಾತ್ಯಕ್ಷಿಕೆ ರೂಪದಲ್ಲಿ ತಿಳಿಸಿಕೊಡಲಾಯಿತು. ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಮಲ್ಲೇಶ ನಾಯ್ಕ ಮತ್ತು ರೈತ ಅನುವುಗಾರ ಸತಿಶ್ ಕದಮ್ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.