ಬೆಳಗಾವಿ: ತಾಲ್ಲೂಕಿನ ಕೆಲವು ಭಾಗಗಳಲ್ಲಿ ಭತ್ತದ ಬೆಳೆಗೆ ‘ಕಂದು ಜಿಗಿ ಹುಳ’ದ ಬಾಧೆ ಕಂಡುಬಂದಿದೆ.
‘ಇದು ಬೆಳೆಗೆ ತೀವ್ರ ಹಾನಿ ಮಾಡುವ ಕೀಟವಾಗಿದೆ. ಚಿಕ್ಕ ಬೆಣೆಯಾಕಾರದ ಕಂದು ಬಣ್ಣದ ಪ್ರೌಢ ಮತ್ತು ಮರಿ ಕೀಟಗಳು ನೀರಿನ ಮಟ್ಟದ ಮೇಲ್ಭಾಗದಲ್ಲಿ ಅಧಿಕ ಸಂಖ್ಯೆಯಲ್ಲಿ ಆವರಿಸಿ ರಸ ಹೀರುತ್ತವೆ. ಇದರಿಂದಾಗಿ ಪೈರು ಒಣಗಿ ಅಲ್ಲಲ್ಲಿ ಸುಟ್ಟು ಹೋದಂತೆ ಕಂಡುಬರುತ್ತದೆ. ಇದರ ಬಾಧೆಯಿಂದ ಶೇ 90ರವರೆಗೂ ಹಾನಿಯಾಗುವ ಸಂಭವವಿರುತ್ತದೆ. ಹೀಗಾಗಿ, ರೈತರು ನಿರ್ಲಕ್ಷ್ಯ ಮಾಡದೆ ತುರ್ತಾಗಿ ನಿಯಂತ್ರಣ ಕ್ರಮವನ್ನು ಕೈಗೊಳ್ಳಬೇಕು’ ಎಂದು ಸಹಾಯಕ ಕೃಷಿ ನಿರ್ದೇಶಕ ಆರ್.ಬಿ. ನಾಯ್ಕರ್ ಸಲಹೆ ನೀಡಿದ್ದಾರೆ.
‘ಪರಿಣಾಮಕಾರಿ ಹತೋಟಿಗಾಗಿ ಗದ್ದೆಯಲ್ಲಿನ ನೀರನ್ನು ಬಸಿದು ಬುಪ್ರೋಫೆಜಿನ್ 1 ಎಂ.ಎಲ್. ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಪೈರಿನ ಬುಡ ಚೆನ್ನಾಗಿ ತೊಯ್ಯುವಂತೆ ಸಿಂಡಿಸಬೇಕು. 2ರಿಂದ 3 ದಿನಗಳ ನಂತರ ನೀರು ಕಟ್ಟಬೇಕು. ಈ ಹಂತದಲ್ಲಿ ಸಾರಜನಕ ಗೊಬ್ಬರ ಹಾಕಬಾರದು. ಸಾರಜನಕ ಗೊಬ್ಬರದಿಂದ ಬಾಧೆಯು ಉಲ್ಬಣವಾಗುತ್ತದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.