ಸಂಕೇಶ್ವರ: ‘ಉತ್ತಮ, ಪಾರದರ್ಶಕ ಹಾಗೂ ಕ್ರಿಯಾಶೀಲ ಆಡಳಿತದ ಅವಶ್ಯಕತೆಯಿದ್ದು ಹುಕ್ಕೇರಿ ತಾಲ್ಲೂಕು ಗ್ರಾಮೀಣ ವಿದ್ಯುಚ್ಛಕ್ತಿ ಸಹಕಾರ ಸಂಘದ ಚುನಾವಣೆಯಲ್ಲಿ ಅಪ್ಪಣ್ಣಗೌಡ ಪಾಟೀಲ ಅವರ ಬಣವನ್ನು ಬೆಂಬಲಿಸಬೇಕು’ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಸಂಕೇಶ್ವರದ ನೇಸರಿ ಗಾರ್ಡನ್ನಲ್ಲಿ ಭಾನುವಾರ ನಡೆದ ಹುಕ್ಕೇರಿ ತಾಲ್ಲೂಕು ಗ್ರಾಮೀಣ ವಿದ್ಯುಚ್ಛಕ್ತಿ ಸಹಕಾರ ಸಂಘದ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಬೇರೆಯವರಿಗೆ ಮಾರ್ಗದರ್ಶಿಯಾಗಿದ್ದ ಸಂಕೇಶ್ವರದ ಹಿರಣ್ಯಕೇಶಿ ಸಹಕಾರ ಸಕ್ಕರೆ ಕಾರ್ಖಾನೆ ಹಾಗೂ ಹುಕ್ಕೇರಿ ತಾಲ್ಲೂಕು ಗ್ರಾಮೀಣ ವಿದ್ಯುಚ್ಛಕ್ತಿ ಸಹಕಾರ ಸಂಘಗಳು ಕಳೆದ 30 ವರ್ಷಗಳಿಂದ ಕತ್ತಿ ಕುಟುಂಬದ ಆಡಳಿತಾವಧಿಯಲ್ಲಿ ಹಾನಿ ಅನುಭವಿಸಿ ಕೋಟ್ಯಾಂತರ ರೂಪಾಯಿ ಸಾಲ ಮಾಡಿಕೊಂಡಿವೆ’ ಎಂದರು.
‘ಬೆಳಗಾವಿ ಜಿಲ್ಲಾ ಕೇಂದ್ರ ಬ್ಯಾಂಕಿನ ಚುನಾವಣೆಯಲ್ಲಿ ರಮೇಶ ಕತ್ತಿ ಅವರಿಗೆ ಒಬ್ಬ ಸಂಚಾಲಕರು ಮಾತ್ರ ಬೆಂಬಲಕ್ಕಿದ್ದರು. ಆದರೆ ನಾವೆಲ್ಲಾ ಕೂಡಿ ಅವರನ್ನು ಜಿಲ್ಲಾ ಕೇಂದ್ರ ಬ್ಯಾಂಕಿಗೆ ಅಧ್ಯಕ್ಷರನ್ನಾಗಿ ಮಾಡಿದೆವು. ಆದರೆ ಸರ್ವಾಧಿಕಾರಿಯಾಗಿ ವರ್ತಿಸತೊಡಗಿದಾಗ ಅವರನ್ನು ಅಧ್ಯಕ್ಷಗಿರಿಯಿಂದ ಕೆಳಗಿಳಿಸಬೇಕಾಯಿತು’ ಎಂದು ತಿಳಿಸಿದರು.
‘ಸಂಕೇಶ್ವರದ ಹಿರಣ್ಯಕೇಶಿ ಸಹಕಾರ ಸಕ್ಕರೆ ಕಾರ್ಖಾನೆ, ಹುಕ್ಕೇರಿ ತಾಲ್ಲೂಕು ವಿದ್ಯುಚ್ಛಕ್ತಿ ಸಹಕಾರ ಸಂಘ ಹಾಗೂ ಬಿ.ಡಿ.ಸಿ.ಸಿ ಬ್ಯಾಂಕಿನಲ್ಲಿ ಅವರು ಮಾಡಿರುವ ಅವ್ಯವಹಾರಗಳನ್ನು ಶೀಘ್ರವೇ ಜನರ ಮುಂದೆ ಇಟ್ಟು ಸರ್ಕಾರದ ವತಿಯಿಂದ ತನಿಖೆ ಮಾಡಲಾಗುವುದು’ ಎಂದು ಹೇಳಿದರು.
ಮಾಜಿ ಸಚಿವ ಶಶಿಕಾಂತ ನಾಯಿಕ ಮಾತನಾಡಿ, ‘ಸಹಕಾರಿ ಧುರೀಣ ರಿಷಭ್ ಪಾಟೀಲ, ದಿ ಅಪ್ಪಣ್ಣಗೌಡ ಪಾಟೀಲ, ದಿ.ಬಸಗೌಡ ಪಾಟೀಲ ಅವರಂಥ ಪ್ರಾಮಾಣಿಕರು ಕಟ್ಟಿದ ಸಂಸ್ಥೆಗಳಿಂದ ಇಡೀ ತಾಲ್ಲೂಕಿನ ಪ್ರತಿಯೊಂದು ಮನೆಯವರು ಪ್ರಯೋಜನ ಪಡೆಯುತಿದ್ದಾರೆ. ಆದರೆ ಅವರು ಕಟ್ಟಿದ ಸಹಕಾರ ಸಂಘಗಳು ಇಂದು ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸುತ್ತಿವೆ. ಇದಕ್ಕೆ ಕಾರಣರಾದವರನ್ನು ಮುಂದಿನ ಚುನಾವಣೆಯಲ್ಲಿ ಮನೆಗೆ ಕಳಿಸಬೇಕು’ ಎಂದು ಮನವಿ ಮಾಡಿದರು.
ಸಭೆಯಲ್ಲಿ ಸಂಕೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ಮುಡಸಿ, ಹುಕ್ಕೇರಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವಿಜಯ ರವದಿ, ಬಸವರಾಜ ಮಟಗಾರ, ಜಯಗೌಡ ಪಾಟೀಲ, ಶಶಿರಾಜ ಪಾಟೀಲ, ರವೀಂದ್ರ ಹಿಡಕಲ್, ದಿಲೀಪ ಹೊಸಮನಿ, ಮಹೇಶ ಹಟ್ಟಿಹೋಳಿ ಮುಂತಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.