ಬೆಳಗಾವಿ: ‘ವ್ಯಕ್ತಿಯನ್ನು ಪರಿಪೂರ್ಣತೆಯತ್ತ ಸಾಗುವಂತೆ ಮಾಡುವುದೇ ವಿದ್ಯೆಯ ಪರಮ ಗುರಿಯಾಗಿದೆ’ ಎಂದು ವಿಶ್ರಾಂತ ಕುಲಪತಿ ಪ್ರೊ.ಬಿ.ಆರ್. ಅನಂತನ್ ಹೇಳಿದರು.
ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವ್ಯಕ್ತಿಯ ಬದುಕು ಮತ್ತು ಸಾಧನೆಯ ಹಿಂದೆ ಗುರುವಿನ ಮಾರ್ಗದರ್ಶನ ಹಾಗೂ ಆತನ ಸಂದೇಶಗಳಿರುತ್ತವೆ. ಜ್ಞಾನದ ಹಸಿವು ನೀಗಿಸುವವನಷ್ಟೇ ಗುರುವಲ್ಲ. ಜೀವನದ ಸರ್ವಾಂಗೀಣ ಪ್ರಗತಿಗೆ ಪೂರಕವಾಗಿ ಬೋಧನೆ ಮಾಡುವವನೇ ನಿಜವಾದ ಗುರು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಆರ್. ರಾಮಚಂದ್ರಗೌಡ ಮಾತನಾಡಿ, ‘ಉನ್ನತ ಚಾರಿತ್ರ್ಯ ನಿರ್ಮಾಣವೇ ಶಿಕ್ಷಣದ ಮೂಲ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಗುರುಗಳ ಪಾತ್ರ ಹಿರಿದಾಗಿದೆ. ಅತ್ಯಂತ ಶ್ರೇಷ್ಠವಾದ ಸೇವೆ ಎಂದರೆ ಶಿಕ್ಷಕರದು. ಹೀಗಾಗಿ, ಸಮಾಜ ನಿರ್ಮಾಣದಲ್ಲಿ ಗುರುಗಳ ಪಾತ್ರ ಹೆಚ್ಚು ಮಹತ್ವಪೂರ್ಣವಾಗಿದೆ’ ಎಂದು ತಿಳಿಸಿದರು.
ಡಾ.ರಶ್ಮಿ ಮತ್ತು ಫರ್ಜಾನಾ ಪ್ರಾರ್ಥಿಸಿದರು. ಕುಲಸಚಿವ ಪ್ರೊ.ಬಸವರಾಜ ಪದ್ಮಶಾಲಿ ಸ್ವಾಗತಿಸಿದರು. ಕುಲಸಚಿವ (ಮೌಲ್ಯಮಾಪನ) ಪ್ರೊ.ರಂಗರಾಜ ವನದುರ್ಗ ಪರಿಚಯಿಸಿದರು. ಹಣಕಾಸು ಅಧಿಕಾರಿ ಶಂಕರಾನಂದ ಬನಶಂಕರಿ ವಂದಿಸಿದರು. ಡಾ.ಪೂಜಾ ಹಲ್ಯಾಳ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.