ಅಥಣಿ: ವರ್ಗಾವಣೆ ಕರಡು ನಿಯಮಗಳನ್ನು ಬದಲಾವಣೆ ಮಾಡುವಂತೆ ಒತ್ತಾಯಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೇತೃತ್ವದಲ್ಲಿ ಶಿಕ್ಷಕರು ಇಲ್ಲಿನ ಬಿಇಒ ಸಿ.ಎಂ. ನೇಮಗೌಡ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಶಿಕ್ಷಕರ ಸಂಘ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಂ. ಹಿರೇಮಠ ಮಾತನಾಡಿ, ‘ಶೇ 20ರಷ್ಟು ಶಿಕ್ಷಕರ ಹುದ್ದೆಗಳು ಖಾಲಿ ಇರುವ ತಾಲ್ಲೂಕುಗಳಿಂದ ವರ್ಗಾವಣೆ ಇಲ್ಲ ಎಂಬ ಅಂಶ ಕೈಬಿಟ್ಟು ಎಲ್ಲ ತಾಲ್ಲೂಕುಗಳಿಂದ ಅಂತರ ಘಟಕ ವರ್ಗಾವಣೆ ಬಯಸುವವರಿಗೆ ಅವಕಾಶ ಕಲ್ಪಿಸಬೇಕು. ಪ್ರಕ್ರಿಯೆ ಸರಳಗೊಳಿಸಬೇಕು’ ಎಂದು ಒತ್ತಾಯಿಸಿದರು.
‘ಸೇವಾ ಜೇಷ್ಠತೆ ಆಧಾರದ ಮೇಲೆ ವರ್ಗಾವಣೆ ಮಾಡಬೇಕು. ಸಿಆರ್ಪಿ, ಬಿಆರ್ಪಿ ವೃಂದದವರಿಗೂ ಎ, ಬಿ, ಸಿ ವಲಯಗಳಿಗೆ ವರ್ಗಾವಣೆ ಹೊಂದಲು ಮುಕ್ತ ಅವಕಾಶ ಕೊಡಬೇಕು. ಕಡ್ಡಾಯವೆಂದು ಪರಿಗಣಿಸದೇ ಅದೇ ತಾಲ್ಲೂಕಿನಲ್ಲಿ ವರ್ಗಾವಣೆಗೆ ಅನುವು ಮಾಡಿಕೊಡಬೇಕು’ ಎಂದು ಕೋರಿದರು.
ಶಿಕ್ಷಕರಾದ ಎಸ್.ಎಸ್. ದಾದಾಗೋಳ, ಸಿ.ಎಂ. ಕಾಂಬಳೆ, ಎ.ಬಿ. ಕುಟಕೋಳಿ, ವೈ.ಎಸ್. ನಾಯಿಕ, ಪಿ.ಎಚ್. ಪತ್ತಾರ, ಎಲ್.ಡಿ. ಹಲ್ಯಾಳ, ಎ.ವೈ. ಹೈವತ್ತಿ, ಎಸ್.ಎಸ್. ಹಡಪದ, ಜಿ.ಜಿ. ಪವಾರ, ಸುವರ್ಣಾ ನಾಯಿಕ, ವಿದ್ಯಾವತಿ ಚಿದ್ರೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.