ಮಣ್ಣಿನಿಂದ ಕೂಡಿರುವ ಚನ್ನಮ್ಮನ ಕಿತ್ತೂರು ತಾಲ್ಲೂಕಿನ ತೇಗೂರು-ಗಂದಿಗವಾಡ ಸಂಪರ್ಕ ರಸ್ತೆ
ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ತೇಗೂರು ಗ್ರಾಮದಿಂದ ನೆರೆಯ ಖಾನಾಪುರ ತಾಲ್ಲೂಕಿನ ಗಂದಿಗವಾಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಅಂದಾಜು ಎರಡು ಕಿ.ಮೀ ಜಿಲ್ಲಾ ಮುಖ್ಯರಸ್ತೆ ಒಮ್ಮೆಯೂ ಡಾಂಬರೀಕರಣ ಕಂಡಿಲ್ಲ. ಈ ರಸ್ತೆಯ ಮೂಲಕ ಸಂಚಾರ ಮಾಡುವ ಪ್ರಯಾಣಿಕರು ತೀವ್ರ ಪ್ರಯಾಸ ಪಡುವಂತಾಗಿದೆ.
‘ಕಿತ್ತೂರಿನ ಪಂಚಾಯತ್ರಾಜ್ ಇಲಾಖೆ ಅಧಿಕಾರಿ ಕೇಳಿದರೆ, ತೇಗೂರು ಕೊನೆಯ ಹದ್ದಿಯವರೆಗೆ ರಸ್ತೆ ಅಭಿವೃದ್ಧಿಪಡಿಸಲಾಗಿದೆ ಎನ್ನುತ್ತಾರೆ. ಆ ಭಾಗದ ಅಧಿಕಾರಿಗಳನ್ನು ಕೇಳಿದರೆ, ನಾವೂ ನಮ್ಮ ಹದ್ದಿಯವರೆಗೆ ರಸ್ತೆ ಅಭಿವೃದ್ಧಿ ಪಡಿಸಿದ್ದೇವೆ ಎನ್ನುತ್ತಾರೆ. ಅಧಿಕಾರಿಗಳ ಈ ಮಾತಿನಿಂದಾಗಿ ಈ ರಸ್ತೆ ಕರ್ನಾಟಕದಲ್ಲಿ, ಅದೂ ಬೆಳಗಾವಿ ಜಿಲ್ಲೆಯಲ್ಲಿ ಇದೆಯೋ ಅಥವಾ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ’ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ರಾಜಬೀದಿ ಹೆಗ್ಗಳಿಕೆ: ‘ಕಿತ್ತೂರು ಸಂಸ್ಥಾನ ಕಾಲದಲ್ಲಿ ತೇಗೂರು- ಗಂದಿಗವಾಡ ರಸ್ತೆ ರಾಜಬೀದಿಯಾಗಿ ಬೀಗಿತ್ತು. ಸುಮಾರು 80 ಅಡಿ ರಸ್ತೆ ಇದಾಗಿತ್ತು. ಪ್ರಾಂತೀಯ ಕಚೇರಿ ಗಂದಿಗವಾಡ ಗ್ರಾಮದಲ್ಲಿತ್ತು’ ಎನ್ನುತ್ತಾರೆ ಗ್ರಾಮಸ್ಥರಾದ ಎಂ. ಎಂ. ರಾಜೀಬಾಯಿ.
ಇಂತಹ ಪ್ರಮುಖ ರಸ್ತೆಯು ಸ್ವಾತಂತ್ರ್ಯಾನಂತರ ಆಳುವವರ ನಿರ್ಲಕ್ಷ್ಯದಿಂದಾಗಿ ಡಾಂಬರೀಕರಣ ಆಗಿಲ್ಲ. ಇದರ ಪರಿಣಾಮ ಈ ರಸ್ತೆಯ ಮೂಲಕ ಸಂಚರಿಸುವ ಪ್ರಯಾಣಿಕರು ಸಂಕಷ್ಟ ಅನುಭವಿಸುವುದು ತಪ್ಪಿಲ್ಲ. ಸಾರ್ವಜನಿಕರ ಹಿತ ಬಯಸುವ ಸರ್ಕಾರ, ಈ ರಸ್ತೆ ಸುಧಾರಣೆಗೆ ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.
‘ಮಣ್ಣಿನಿಂದ ಕೂಡಿರುವ ವಿಸ್ತಾರವಾದ ಈ ರಸ್ತೆಯುದ್ದಕ್ಕೂ ಅಲ್ಲಲ್ಲಿ ಕಲ್ಲುಗಳು ಎದ್ದಿವೆ. ವಾಹನದ ದೂಳು ವಾಹನದೆತ್ತರಕ್ಕೂ ಏಳುತ್ತದೆ. ಬೈಕ್ ಸವಾರರಿಗೆ ಇದರಿಂದ ಹೆಚ್ಚು ಕಿರಿ ಕಿರಿಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ರಸ್ತೆ ಡಾಂಬರೀಕರಣಕ್ಕೆ ಮುಂದಾಗಬೇಕು’ ಎನ್ನುತ್ತಾರೆ ಕರ್ನಾಟಕ ರಾಜ್ಯ ಗಡಿನಾಡು ಹಿತರಕ್ಷಣಾ ಸಂಘದ ಅಧ್ಯಕ್ಷ ಬಸವರಾಜ ಭಂಗಿ.
ಈ ಬಗ್ಗೆ ಮಾಹಿತಿ ಪಡೆಯಲು ಖಾನಾಪುರ ತಾಲ್ಲೂಕಿನ ಪಂಚಾಯತ್ ರಾಜ್ ಇಲಾಖೆ ಕಿರಿಯ ಎಂಜಿನಿಯರ್ ಸಂಪರ್ಕಿಸಿದರೆ ಲಭ್ಯವಾಗಲಿಲ್ಲ.
ಚನ್ನಮ್ಮನ ಕಿತ್ತೂರಿಗೆ ವ್ಯಾಪಾರ, ವಹಿವಾಟಿನ ಒಡನಾಟ ಹೆಚ್ಚಿದೆ. ಹೀಗಾಗಿ ಈ ರಸ್ತೆ ಡಾಂಬರೀಕರಣ ಕಾಮಗಾರಿ ಕೈಗೊಳ್ಳದಿದ್ದರೆ ಗಂದಿಗವಾಡ-ತೇಗೂರು ರಸ್ತೆ ಬಂದ್ ಮಾಡಿ ಪ್ರತಿಭಟಿಸಲಾಗುವುದು.ಎಂ. ಎಂ. ರಾಜೀಬಾಯಿ, ಗಂದಿಗವಾಡ ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.