ADVERTISEMENT

ಮೈದುಂಬಿದ ಗೋಕಾಕ ಜಲಪಾತ

​ಪ್ರಜಾವಾಣಿ ವಾರ್ತೆ
Published 22 ಜುಲೈ 2023, 3:18 IST
Last Updated 22 ಜುಲೈ 2023, 3:18 IST
ಘಟಪ್ರಭಾ ಸಮೀಪ ಮೈದುಂಬಿ ಹರಿಯುತ್ತಿರುವ ಗೋಕಾಕ ಜಲಪಾತವು ಶುಕ್ರವಾರ ಸಂಜೆ ಕಂಡುಬಂದ ದೃಶ್ಯ
ಘಟಪ್ರಭಾ ಸಮೀಪ ಮೈದುಂಬಿ ಹರಿಯುತ್ತಿರುವ ಗೋಕಾಕ ಜಲಪಾತವು ಶುಕ್ರವಾರ ಸಂಜೆ ಕಂಡುಬಂದ ದೃಶ್ಯ    

ಚಂದ್ರಶೇಖರ ಪಿ. ದೊಡ್ಡಮನಿ

ಘಟಪ್ರಭಾ: ಅಬ್ಬಾ ಕೊನೆಗೂ ಮಳೆ ಬಂತಲ್ಲಾ...! ಮುಂಗಾರು ಬೆಳೆ ಕೈಕೊಡುವ ಸ್ಥಿತಿ ಎದುರಾದರೂ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ನಿಟ್ಟುಸಿರು ಬಿಟ್ಟ ರೈತನ ಮೊಗದಲ್ಲೀಗ ಮಂದಹಾಸ ಗೋಚರಿಸಿದೆ.

ಮುಂಗಾರು ಬಂತೆಂದರೆ ನಿಸರ್ಗಪ್ರಿಯರು ಸಹಜವಾಗಿ ನದಿ, ಕೆರೆ, ಕಟ್ಟೆ, ಜಲಪಾತಗಳೆಡೆಗೆ ಧಾವಿಸಿ ಅದರ ಸೊಬಗನ್ನು ಸವಿಯಲು ಸಾಗುತ್ತಾರೆ. ಅದರಂತೆ ಉತ್ತರ ಕರ್ನಾಟಕದ ನಯಾಗರ ಎಂದೇ ಪ್ರಸಿದ್ಧಿ ಪಡೆದಿರುವ ಗೋಕಾಕ ಜಲಪಾತ ಮೈದಳೆಯುವುದೇ ತಡ; ಜನಸಾಗರ ಹರಿದು ಬರಲಿದೆ. ಹೀಗಾಗಿ ನೆರೆ ರಾಜ್ಯದ ಮಹಾರಾಷ್ಟ್ರ, ಗೋವಾ ಜನ ವೀಕೆಂಡ್‌ದಲ್ಲಿ ಈ ಜಲಪಾತ ವಿಕ್ಷಣೆಗೆಂದು ಬಂದು ಇಲ್ಲಿಯ ನೈಸರ್ಗಿಕ ಸೊಬಗ ನೋಡಿ ಸಂಭ್ರಮಿಸುತ್ತಾರೆ.

ADVERTISEMENT

ಕಳೆದ ವಾರ ವೀಕ್ಷಣೆಗೆ ಬಂದ ಜನ ಬರಿದಾದ ಜಲಪಾತವನ್ನು ನೋಡಿ ಬಂದ ದಾರಿಯಲ್ಲಿ ಸುಂಕವಿಲ್ಲದೆ ವಾಪಸ್ಸಾಗಿದ್ದರು. ವ್ಯಾಪಕ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಈ ಜಲಪಾತ ನಾಲ್ಕೇ ದಿನದಲ್ಲಿ ಮೈದುಂಬಿ ಹರಿಯುತ್ತಿದೆ. ಗುರುವಾರವಂತೂ ಜಲಪಾತ ಭೋರ್ಗರೆಯುತ್ತಿದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟ ಹಾಗೂ ಗಡಿ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಗೋಕಾಕ ಜಲಪಾತಕ್ಕೆ ಕಳೆ ಬಂದಿದೆ.

ಮೃಗಶಿರಾ, ಆರಿದ್ರಾ ಕೈಕೊಟ್ಟಿದ್ದು, ಪುಷ್ಯ ಮಳೆ ರೈತರ ಕೈಹಿಡಿದಿದೆ. ಮಳೆ ಆರಂಭವಾಗುತ್ತಿದ್ದಂತೆ ತಮ್ಮ ಹೊಲ ಗದ್ದೆಗಳತ್ತ ಸಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಈಗಗಾಲೇ ಬಿತ್ತಬೇಕಾಗಿದ್ದ ಹೆಸರು, ಅಲಸಂದಿ, ಉದ್ದು, ಜೋಳ ಬಿತ್ತನೆಗೆ ತಡವಾಗಿದೆ. ತಡವಾಗಿ ಬಿತ್ತನೆ ಮಾಡಿದರೆ ಇಳುವರಿ ಅಷ್ಟಕ್ಕಷ್ಟೆ. ಹೀಗಾಗಿ ರೈತರು ಪರ್ಯಾಯ ಚಿಂತನೆಯಲ್ಲಿದ್ದಾರೆ.

ಇನ್ನೂ ಕೆಲ ರೈತರು ಬೆಳೆದಿದ್ದ ಅಪಾರ ಪ್ರಮಾಣದ ಕಬ್ಬು ಒಣಗುವ ಸ್ಥಿತಿಗೆ ತಲುಪಿದೆ. ಒಟ್ಟಾರೆ, ಕೊನೆ ಘಳಿಗೆಯಲ್ಲಿ ಇದ್ದ ಬೆಳೆಗಳಿಗೆ ಜೀವ ಬಂದಂತಾಗಿದೆ ಎಂದು ಶಿಂಧಿಕುರಬೇಟ ನಿವಾಸಿ ಸಿದ್ದಪ್ಪ ಮುರಗೋಡ ಹೇಳಿದರು.

ಸೆಲ್ಫಿ ಧಾವಂತದಲ್ಲಿ ಯುವಜನರನ್ನು ಜಲಪಾತದೆಡೆ ಹೋಗದಂತೆ ಪೊಲೀಸ್ ಸಿಬ್ಬಂದಿ ನಿರ್ಬಂಧಿಸಿದ್ದು, ಅಹಿತಕರ ಘಟನೆಗಳು ನಡೆಯದಂತೆಯೂ ಸೂಕ್ತ ಕ್ರಮಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.