ADVERTISEMENT

ಖಾನಾಪುರ: ಸಡಾ ಕೋಟೆಯ ಅವಶೇಷಗಳೂ ಆಕರ್ಷಕ

ಪುನರುಜ್ಜೀವನಕ್ಕೆ ಕಾಯುತ್ತಿದೆ ಛತ್ರಪತಿ ಶಿವಾಜಿ ಮಹಾರಾಜರ ಕಾಲದ ಸಡಾ ಕೋಟೆ

ಪ್ರಸನ್ನ ಕುಲಕರ್ಣಿ
Published 9 ಮಾರ್ಚ್ 2025, 7:04 IST
Last Updated 9 ಮಾರ್ಚ್ 2025, 7:04 IST
ಖಾನಾಪುರ ತಾಲ್ಲೂೂಕು ಸಡಾ ಗ್ರಾಮದಲ್ಲಿರುವ ಐತಿಹಾಸಿಕ ಕೋಟೆಯ ಅವಶೇಷ
ಖಾನಾಪುರ ತಾಲ್ಲೂೂಕು ಸಡಾ ಗ್ರಾಮದಲ್ಲಿರುವ ಐತಿಹಾಸಿಕ ಕೋಟೆಯ ಅವಶೇಷ   

ಖಾನಾಪುರ: ಕರ್ನಾಟಕ, ಗೋವಾ, ಮಹಾರಾಷ್ಟ್ರ ರಾಜ್ಯಗಳ ಗಡಿ ಹಂಚಿಕೊಂಡಿರುವ ತಾಲ್ಲೂಕಿನ ಸಡಾ ಗ್ರಾಮದ ಹೊರವಲಯದಲ್ಲಿ ಇರುವ ಐತಿಹಾಸಿಕ ಕೋಟೆ ಆಕರ್ಷಕವಾಗಿದೆ. ಇದು ಛತ್ರಪತಿ ಶಿವಾಜಿ ಮಹಾರಾಜರ ಕಾಲದಲ್ಲಿ ಕಟ್ಟಲಾಗಿದೆ ಎಂಬುದು ಇತಿಹಾಸಕಾರರ ಹೇಳಿಕೆ. ದಟ್ಟ ಹಸಿರಿನ ಮಧ್ಯೆ ಇರುವ ಕೋಟೆಯ ಅವಶೇಷಗಳು ಆಕರ್ಷಕವಾಗಿವೆ. ಪುನರುಜ್ಜೀವನಕ್ಕೆ ಕಾದಿವೆ.

ಕಣಕುಂಬಿ ಅರಣ್ಯದ ವ್ಯಾಪ್ತಿಯಲ್ಲಿ ಬೆಳಗಾವಿ– ಚೋರ್ಲಾ ರಾಜ್ಯ ಹೆದ್ದಾರಿಯಲ್ಲಿ ಸಡಾ ಕ್ರಾಸ್‌ನಿಂದ 8 ಕಿ.ಮೀ ಒಳಗೆ ದಟ್ಟವಾದ ಕಾಡಿನಲ್ಲಿರುವ ಸಡಾ ಗ್ರಾಮದ ಹೊರವಲಯದಲ್ಲಿರುವ ಕೋಟೆ ಅವಸಾನದ ಅಂಚಿನಲ್ಲಿದೆ. ಕೋಟೆಯ ಪ್ರವೇಶದ್ವಾರ, ತಡೆಗೋಡೆಗಳು, ಕಮಾನುಗಳು ನಿರ್ವಹಣೆಯ ಕೊರತೆಯಿಂದ ಹಾಳಾಗಿವೆ. ಗೋಡೆಗಳು ಭಾಗಶಃ ಬಿದ್ದಿವೆ. ಸುತ್ತಮುತ್ತ ಮತ್ತು ಒಳಭಾಗದಲ್ಲಿ ಗಿಡಗಂಟಿಗಳು ಬೆಳೆದಿವೆ. ಕಾಯಕಲ್ಪಕ್ಕೆ ಕಾಯುತ್ತಿದೆ.

17ನೇ ಶತಮಾನದಲ್ಲಿ ಈ ಕೋಟೆಯನ್ನು ಶಿವಾಜಿ ಮಹಾರಾಜರ ಸೂಚನೆ ಮೇರೆಗೆ ಮರಾಠಾ ಪೇಶ್ವೆಗಳು ನಿರ್ಮಿಸಿದ್ದರು. ಕೋಟೆಗೆ ಸ್ವತಃ ಶಿವಾಜಿ ಮಹಾರಾಜರ ಪಾದಸ್ಪರ್ಶವಾಗಿತ್ತು ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ. ಸಡಾ ಮಾದರಿಯಂತೆ ಬೆಳಗಾವಿ– ಖಾನಾಪುರ ಭಾಗದಲ್ಲಿ ಬೆಳಗಾವಿಯ ಕೋಟೆ, ಆನಂದಗಡ, ಭೀಮಗಡ, ರಾಜಹಂಸಗಡ ಕೋಟೆಗಳನ್ನು ಇದೇ ಅವಧಿಯಲ್ಲಿ ನಿರ್ಮಿಸಲಾಯಿತ್ತು ಎಂದು ಹೇಳಲಾಗುತ್ತದೆ.

ADVERTISEMENT

‘ಮಹಾರಾಷ್ಟ್ರ ಸರ್ಕಾರ ಅಲ್ಲಿನ ಕೋಟೆಗಳ ಸಂರಕ್ಷಣೆಗಾಗಿ ಪ್ರಾಧಿಕಾರ ರಚಿಸಿದೆ. ಪುಣೆ, ಸಾತಾರಾ, ಕೊಲ್ಹಾಪುರ, ರತ್ನಾಗಿರಿ ಜಿಲ್ಲೆಗಳಲ್ಲಿರುವ ಕೋಟೆಗಳ ಸಂರಕ್ಷಣೆ, ಅಭಿವೃದ್ಧಿ ಮತ್ತು ಕೋಟೆಗಳ ಇತಿಹಾಸವನ್ನು ತಿಳಿಸುವ ವಿಶೇಷ ಯೋಜನೆಗಳನ್ನು  ಹಮ್ಮಿಕೊಂಡಿದೆ. ಶಿವಾಜಿ ಮಹಾರಾಜರ ಕಾಲದಲ್ಲಿ ತಾಲ್ಲೂಕಿನ ಸಡಾ, ನಂದಗಡ, ಮಾಚಿಗಡ, ಭೀಮಗಡಗಳಲ್ಲಿ ಮತ್ತು ಬೆಳಗಾವಿ ತಾಲ್ಲೂಕಿನ ರಾಜಹಂಸಗಡ ಗ್ರಾಮದ ಬಳಿ ಕೋಟೆಗಳನ್ನು ನಿರ್ಮಾಣ ಮಾಡಲಾಗಿದೆ. ಇವುಗಳ ಸಂರಕ್ಷಣೆಗಾಗಿ ನಮ್ಮ ರಾಜ್ಯದಲ್ಲೂ ಮಹಾರಾಷ್ಟ್ರ ಮಾದರಿಯಲ್ಲಿ ಪ್ರಯತ್ನಗಳು ನಡೆಯಬೇಕು’ ಎಂದು ಪಾರವಾಡ ಗ್ರಾಮದ ನಿವಾಸಿ ದತ್ತಾರಾಮ ಗಾವಡೆ ಆಗ್ರಹಿಸುತ್ತಾರೆ.

ಖಾನಾಪುರ ತಾಲ್ಲೂೂಕು ಸಡಾ ಗ್ರಾಮದಲ್ಲಿರುವ ಐತಿಹಾಸಿಕ ಕೋಟೆಯ ಅವಶೇಷ
ದಟ್ಟ ಹಸಿರುನ ಮಡಿಲು...
ಸಡಾ ಮಾನ ಚೋರ್ಲಾ ಹೊಳಂದ ಕಣಕುಂಬಿ ಪಾರವಾಡ ಚಿಗುಳೆ ಬೇಟಣೆ ಗೋವಾ ರಾಜ್ಯದ ಸೂರಲ್ ಮಹಾರಾಷ್ಟ್ರದ ಮಾಂಗೇಲಿ ಗ್ರಾಮಗಳ ನಾಗರಿಕರು ಈ ಕೋಟೆಗೆ ಮೇಲಿಂದ ಮೇಲೆ ಭೇಟಿ ನೀಡುತ್ತಾರೆ. ಪ್ರತಿ ವರ್ಷ ಶಿವಾಜಿ ಮಹಾರಾಜರ ಜಯಂತಿ ದೀಪಾವಳಿ ಯುಗಾದಿ ಸೇರಿದಂತೆ ವಿಶೇಷವಾದ ಹಬ್ಬಹರಿದಿನಗಳಂದು ಸಡಾ ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಊರಿನವರು ಸೇರಿ ಈ ಕೋಟೆ ಹಾಗೂ ಸುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸುವ ಮೂಲಕ ಕೋಟೆಯ ಸಂರಕ್ಷಣೆಗೆ ತಮ್ಮಿಂದಾಗುವ ಪ್ರಯತ್ನಗಳನ್ನು ಕೈಗೊಂಡಿದ್ದಾರೆ. ಆದರೂ ಕೋಟೆಯ ಸಂರಕ್ಷಣೆಗೆ ಸರ್ಕಾರದಿಂದಲೂ ಪ್ರಯತ್ನಗಳು ನಡೆಯಬೇಕು ಎಂಬುದು ಈ ಭಾಗದ ನಾಗರಿಕರ ಆಗ್ರಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.