ADVERTISEMENT

ಮೋದಿ ಅವರಂಥ ದೇಶಭಕ್ತ ‍ಪ್ರಧಾನಿ ಇನ್ನೊಬ್ಬರಿಲ್ಲ: ಸಚಿವ ಗೋವಿಂದ ಕಾರಜೋಳ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 10:04 IST
Last Updated 10 ಆಗಸ್ಟ್ 2022, 10:04 IST
ಮೋದಿ
ಮೋದಿ    

ಬೆಳಗಾವಿ: ‘ದೇಶದಲ್ಲಿ ಇದೂವರೆ‌ಗಿನ ಯಾವುದೇ ಪ್ರಧಾನಿ, ನರೇಂದ್ರ ಮೋದಿ ಅವರಷ್ಟು ಪ್ರಖರ ದೇಶಭಕ್ತ ಆಗಿರಲಿಲ್ಲ. ಅವರ ಬಗ್ಗೆ ಮಾತನಾಡುವ ಅರ್ಹತೆ ಕಾಂಗ್ರೆಸ್ಸಿಗರಿಗೆ ಇಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ನಾನು ಕಂಡ ಪ್ರಖರ ದೇಶಭಕ್ತ ಪ್ರಧಾನಿಯೆಂದರೆ ಅದು ಮೋದಿ ಅವರೇ. ಮಹಮ್ಮದ್‌ ಅಲಿ ಜಿನ್ನಾ ಜೊತೆ ಕೈ ಜೋಡಿಸಿದವರು ಕಾಂಗ್ರೆಸ್ಸಿಗರು. ದೇಶ ಒಡೆದವರು ಕಾಂಗ್ರೆಸ್ಸಿಗರು. ಇಂಥವರು ಹರ್‌ಘರ್‌ ತಿರಂಗಾ ಬಗ್ಗೆ ಮಾತನಾಡುವುದು ಸರಿಯೇ?’ ಎಂದು ಅವರು ನಗದಲ್ಲಿ ಬುಧವಾರ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ಸಿದ್ದರಾಮಯ್ಯ ಅವರ ಈಗಿನ ಆರೋಪಗಳು ವಿಚಿತ್ರವಾಗಿವೆ. ಕಾಂಗ್ರೆಸ್ಸಿಗರಿಗೆ ಅಷ್ಟು ದೇಶಭಕ್ತಿ ಇದ್ದರೆ ದೇಶ ಹೋಳಾಗುತ್ತಿರಲಿಲ್ಲ. ತಾವು ಅಹಿಂದ ನಾಯಕ ಎಂದು ಪದೇಪದೇ ಹೇಳಿಕೊಳ್ಳುತ್ತಾರೆ. ಆದರೆ, ಮೋದಿ ಅವರು ಇವರಿಗಿಂತ ದೊಡ್ಡ ಅಹಿಂದ ನಾಯಕ’ ಎಂದರು.

ADVERTISEMENT

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ಇದನ್ನು ಅರಗಿಸಿಕೊಳ್ಳುವ ಸಾಮರ್ಥ್ಯ ಕಾಂಗ್ರೆಸ್‌ ನಾಯಕರಿಗೆ ಇಲ್ಲ. ಹೀಗಾಗಿ, ಮುಖ್ಯಮಂತ್ರಿ ಬದಲಾವಣೆಯ ಗಾಳಿಸುದ್ದಿ ಹರಡಿದ್ದಾರೆ. ಇವರಿಗೆಲ್ಲೋ ಭ್ರಮೆ’ ಎಂದೂ ಮೂದಲಿಸಿದರು.

‘ಶೇಕಡ 40 ಕಮಿಷನ್‌ ಸರ್ಕಾರ ಎಂದು ಪದೇಪದೇ ಆರೋಪಿಸುತ್ತಾರೆ. ಆದರೆ, ಇದರ ಬಗ್ಗೆ ಒಂದು ಪ್ರಕರಣ ಕೂಡ ಇಲ್ಲ. ನಾವು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದೇವೆ. ಆರೋಪ ಮಾಡುವುದು ಅವರ ಹುಟ್ಟುಗುಣ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.