ADVERTISEMENT

ಸುರೇಶ ಅಂಗಡಿ ಅವರನ್ನು ಮುಖ್ಯಮಂತ್ರಿ ಮಾಡಲು ಚರ್ಚೆ ನಡೆದಿತ್ತು: ಲಿಂಗರಾಜ ಪಾಟೀಲ

ಸೋದರ ಮಾವ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 8:20 IST
Last Updated 29 ಸೆಪ್ಟೆಂಬರ್ 2020, 8:20 IST
ಸುರೇಶ ಅಂಗಡಿ
ಸುರೇಶ ಅಂಗಡಿ   

ಬೆಳಗಾವಿ: ‘ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಅವರನ್ನು ರಾಜ್ಯದ ಮುಂದಿನ ಮುಖ್ಯಮಂತ್ರಿ ಮಾಡಬೇಕು ಎಂಬ ಮಹತ್ವದ ಚರ್ಚೆ ನವದೆಹಲಿಯಲ್ಲಿ ನಾಲ್ಕು ತಿಂಗಳ ಹಿಂದೆ ನಡೆದಿತ್ತು’ ಎಂದು ಅಂಗಡಿ ಅವರ ಸೋದರ ಮಾವ, ರೈತ ಮುಖಂಡ ಲಿಂಗರಾಜ ಪಾಟೀಲ ಇಲ್ಲಿ ಹೇಳಿದರು.

ಇಲ್ಲಿನ ಅಂಗಡಿ ಅವರ ಗೃಹ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಸುರೇಶ ಅವರ ಹೆಸರು ಮುಂಚೂಣಿಯಲ್ಲಿತ್ತು. ಈ ವಿಷಯವನ್ನು ಅನೇಕ ಸಂಸದರು ಪ್ರಸ್ತಾಪಿಸಿದ್ದರು; ಬೆಂಬಲಿಸಿದ್ದರು. ದೆಹಲಿಯ ಮನೆಯಲ್ಲಿ ಹಲವು ಸಭೆಗಳು ನಡೆದಿದ್ದವು. ನಾನೂ ಭಾಗಿಯಾಗಿದ್ದೆ. ಒಳ್ಳೆಯ ವ್ಯಕ್ತಿ, ಅಜಾತಶತ್ರು, ಹೆಸರು ಕೆಡಿಸಿಕೊಂಡಿಲ್ಲ. ಸಮಾಜದ ನಾಯಕ ಹಾಗೂ ಎಲ್ಲರಿಗೂ ಬೇಕಾದವರಾಗಿದ್ದಾರೆ. ಈ ಕಾರಣದಿಂದ ಪರಿಗಣಿಸಬೇಕು ಎಂಬ ವಿಷಯ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಆದರೆ, ದೈವ ಈ ರೀತಿ ಮಾಡಿತು’ ಎಂದು ತಿಳಿಸಿದರು.

ADVERTISEMENT

‘ಮುಂಬರುವ ಉಪ ಚುನಾವಣೆಯಲ್ಲಿ ಅಂಗಡಿ ಕುಟುಂಬದವರಿಗೆ ಟಿಕೆಟ್‌ ನೀಡಬೇಕು ಎಂಬ ವಿಷಯದಲ್ಲಿ ಜಿಲ್ಲೆಯ ಎಲ್ಲ ಮುಖಂಡರ ಬೆಂಬಲವಿದೆ ಹಾಗೂ ಅನುಕಂಪವೂ ಇದೆ. ಸಮಾಜದವರು ಸೇರಿದಂತೆ ಹಲವು ವರ್ಗದವರು ನನ್ನ ಮೇಲೆ ಒತ್ತಡ ತರುತ್ತಿದ್ದಾರೆ. ಈ ವಿಷಯವನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಿಗೆ ತಿಳಿಸಿದ್ದೇನೆ. ಟಿಕೆಟ್ ಕೊಟ್ಟರೆ ದಾಖಲೆಯ ಅಂತರದಿಂದ ಗೆದ್ದು ಬರುತ್ತಾರೆ. ಪತ್ನಿ, ಪುತ್ರಿಯರಲ್ಲಿ ಯಾರನ್ನಾದರೂ ಪರಿಗಣಿಸಬೇಕು ಎಂದು ಕೋರಿದ್ದೇನೆ’ ಎಂದು ಹೇಳಿದರು.

‘ಇದಕ್ಕೆ ಅಧ್ಯಕ್ಷರು ಪ್ರತಿಕ್ರಿಯಿಸಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸೇರಿದಂತೆ ಪಕ್ಷದ ಎಲ್ಲ ಮುಖಂಡರೊಂದಿಗೂ ಚರ್ಚಿಸುತ್ತೇನೆ’ ಎಂದರು.

ಅಂಗಡಿ ಕುಟುಂಬದವರಿಗೆ ಸಾಂತ್ವನ ಹೇಳಿ ಹೊರ ಬಂದ ಕಟೀಲ್ ಅವರನ್ನು ಎದುರಾದ ಮುಖಂಡ ಬಸನಗೌಡ ಚಿಕ್ಕನಗೌಡರ, ‘ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಸುರೇಶ ಅಂಗಡಿ ಅಪಾರ ಕೊಡುಗೆ ನೀಡಿದ್ದಾರೆ. ಇದನ್ನು ಪರಿಗಣಿಸಿ, ಉಪ ಚುನಾವಣೆಯಲ್ಲಿ ಅವರ ಕುಟುಂಬದವರಿಗೆ ಟಿಕೆಟ್ ಕೊಡಬೇಕು. ಚುನಾವಣೆಯಲ್ಲಿ ಗೆಲ್ಲುವವರೆಗೂ ಪಕ್ಷ ಕುಟುಂಬದೊಂದಿಗೆ ನಿಲ್ಲಬೇಕು. ಪರಿಗಣಿಸದಿದ್ದರೆ ಪ್ರತಿಭಟನೆ ಅನಿವಾರ್ಯವಾಗಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.