ADVERTISEMENT

‘ಪುಸ್ತಕ ಸಂಸ್ಕೃತಿಗೆ ಜೀವ ತುಂಬಿದ ತೋಂಟದ ಶ್ರೀ': ಸಿದ್ದು ಯಾಪಲಪರವಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 16:14 IST
Last Updated 20 ಅಕ್ಟೋಬರ್ 2021, 16:14 IST
ಬೆಳಗಾವಿಯ ಬಸವ ಕಾಲೊನಿಯ ಬಸವಣ್ಣ ಮಂದಿರದಲ್ಲಿ ಬುದವಾರ ನಡೆದ ಲಿಂ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರ 3ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಬಸವರಾಜ ಜಗಜಂಪಿ ಮಾತನಾಡಿದರು
ಬೆಳಗಾವಿಯ ಬಸವ ಕಾಲೊನಿಯ ಬಸವಣ್ಣ ಮಂದಿರದಲ್ಲಿ ಬುದವಾರ ನಡೆದ ಲಿಂ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರ 3ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಬಸವರಾಜ ಜಗಜಂಪಿ ಮಾತನಾಡಿದರು   

ಬೆಳಗಾವಿ: ‘ಗದುಗಿನ ತೋಂಟದಾರ್ಯ ಸಂಸ್ಥಾನ ಮಠದ ದಿ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಪುಸ್ತಕ ಸಂಸ್ಕೃತಿಗೆ ಜೀವ ತುಂಬುವ ಕಾರ್ಯ ಮಾಡಿದ್ದರು’ ಎಂದು ಪ್ರಾಚಾರ್ಯ, ಸಾಹಿತಿ ಪ್ರೊ.ಸಿದ್ದು ಯಾಪಲಪರವಿ ಸ್ಮರಿಸಿದರು.

ನಗರದ ಬಸವ ಕಾಲೊನಿಯ ಬಸವಣ್ಣ ಮಂದಿರದಲ್ಲಿ ತೋಂಟದ ಸಿದ್ಧಲಿಂಗ ಸ್ವಾಮೀಜಿ ಸಾಹಿತ್ಯ ಪ್ರತಿಷ್ಠಾನದಿಂದ ಲಿಂ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರ 3ನೇ ಪುಣ್ಯಸ್ಮರಣೆ ಮತ್ತು ಶಿವನಗೌಡ ಗೌಡರ ವಿರಚಿತ ‘ತಾಯ್ತನದ ತವನಿಧಿ’ (ಕನ್ನಡ) ಹಾಗೂ ‘ಕನ್ನಡ ಕುಲಗುರು ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ’ (ಮರಾಠಿ. ಅನುವಾದ: ಶಾಲಿನಿಯಾಯಿ ದೊಡಮನಿ) ಪುಸ್ತಕಗಳನ್ನು ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪುಸ್ತಕಗಳು ಜಗತ್ತನ್ನು ಆಳುತ್ತವೆ ಎನ್ನುವುದನ್ನು ನಂಬಿದ್ದ ಶ್ರೀಗಳು 600ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ, ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದರು. ಸಮಕಾಲೀನ ವ್ಯಕ್ತಿಗಳ ಕುರಿತು ಬರೆಯುವುದು ಕಷ್ಟ. ಆದರೆ, ಶ್ರೀಗಳ ಕುರಿತು 40ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿರುವುದು ಆಶ್ಚರ್ಯದ ಸಂಗತಿ. ಮಾತೃಮಮತಾ ಮೂರ್ತಿಗಳಾಗಿದ್ದ ಶ್ರೀಗಳು ನಿಜವಾದ ಅರ್ಥದಲ್ಲಿ ತಾಯ್ತನದ ತವನಿಧಿಯಾಗಿದ್ದರು’ ಎಂದು ನೆನೆದರು.

ADVERTISEMENT

‘ಇಂದು ಮನುಷ್ಯ ಸಂಬಂಧಗಳು ಹಾಳಾಗುತ್ತಿವೆ. ಮಾನವೀಯತೆ ಮೌಲ್ಯಗಳು ಮರೆಯಾಗುತ್ತಿವೆ. ಈ ಸಂದರ್ಭದಲ್ಲಿ ಶ್ರೀಗಳ ಆದರ್ಶದ ಬದುಕು ನಮಗೆಲ್ಲರಿಗೂ ಮಾದರಿಯಾಗಿದೆ’ ಎಂದರು.

ಪುಸ್ತಕಗಳನ್ನು ಸಾಹಿತಿ ಡಾ.ಬಸವರಾಜ ಜಗಜಂಪಿ ಬಿಡುಗಡೆ ಮಾಡಿದರು. ಶಿರೀಷ ಜೋಶಿ ಅವರು ಶ್ರೀಗಳೊಂದಿಗಿನ ತಮ್ಮ ಒಡನಾಟವನ್ನು ನೆನೆದರು. ಡಾ.ಸುರೇಶ ಹನಗಂಡಿ, ಶಿವನಗೌಡ ಗೌಡರ, ಎಸ್.ಬಿ. ಬಿದರೆ, ಕೆ.ಐ. ಗಾಣಿಗೇರ, ಪ್ರಕಾಶ ಗಿರಿಮಲ್ಲನವರ, ಪಿ.ಜಿ. ಕೆಂಪಣ್ಣವರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.