ADVERTISEMENT

ನಿಯಮ ಉಲ್ಲಂಘನೆ| ಶೌಚಕ್ಕೆ ₹2ರ ಬದಲಿಗೆ ₹10 ವಸೂಲಿ: ಆಕ್ರೋಶ

ಇಮಾಮ್‌ಹುಸೇನ್‌ ಗೂಡುನವರ
Published 21 ಜುಲೈ 2025, 2:42 IST
Last Updated 21 ಜುಲೈ 2025, 2:42 IST
<div class="paragraphs"><p>ಬೆಳಗಾವಿ ಕೇಂದ್ರೀಯ ಬಸ್‌ ನಿಲ್ದಾಣದಲ್ಲಿರುವ ಸಾಮೂಹಿಕ ಶೌಚಗೃಹ</p></div>

ಬೆಳಗಾವಿ ಕೇಂದ್ರೀಯ ಬಸ್‌ ನಿಲ್ದಾಣದಲ್ಲಿರುವ ಸಾಮೂಹಿಕ ಶೌಚಗೃಹ

   

ಬೆಳಗಾವಿ: ಇಲ್ಲಿನ ಕೇಂದ್ರೀಯ ಬಸ್‌ ನಿಲ್ದಾಣದಲ್ಲಿರುವ ಸಾಮೂಹಿಕ ಶೌಚಗೃಹಗಳನ್ನು ಬಳಸುವ ಪ್ರಯಾಣಿಕರಿಂದ ಸುಲಿಗೆ ಮಾಡಲಾಗುತ್ತಿದೆ!

ಸದಾ ಪ್ರಯಾಣಿಕರಿಂದ ಗಿಜಿಗುಡುವ ಬೆಳಗಾವಿ ನಿಲ್ದಾಣದಿಂದ ಕರ್ನಾಟಕ ಮಾತ್ರವಲ್ಲದೆ; ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ವಿವಿಧ ನಗರ–ಪಟ್ಟಣಗಳಿಗೆ ಬಸ್‌ಗಳು ಸಂಚರಿಸುತ್ತವೆ. ನಗರ ಬಸ್‌ ನಿಲ್ದಾಣ (ಸಿಬಿಟಿ) ಕಾಮಗಾರಿ ಇನ್ನೂ ಪೂರ್ಣಗೊಳ್ಳದ್ದರಿಂದ ನಗರ ಬಸ್‌ಗಳಿಗೂ ಇದೇ ನಿಲ್ದಾಣ ಆಧಾರವಾಗಿದೆ. ನಿತ್ಯ ಸುಮಾರು 70 ಸಾವಿರ ಪ್ರಯಾಣಿಕರು ಬೆಳಗಾವಿ ನಿಲ್ದಾಣ ಮಾರ್ಗವಾಗಿ ಪ್ರಯಾಣಿಸುತ್ತಾರೆ.

ADVERTISEMENT

ಅವರಿಗೆ ಅನುಕೂಲವಾಗಲೆಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಬಸ್‌ ನಿಲ್ದಾಣದಲ್ಲಿ ಮೂರು ಕಡೆ ಸಾರ್ವಜನಿಕ ಶೌಚಗೃಹಗಳನ್ನು ನಿರ್ಮಿಸಿದೆ. ನಿರ್ವಹಣೆಗಾಗಿ ಅವುಗಳನ್ನು ಗುತ್ತಿಗೆ ನೀಡಲಾಗಿದ್ದು, ‘ಪ್ರಯಾಣಿಕರಿಂದ ಶೌಚಕ್ಕೆ ₹2 ಪಡೆಯಬೇಕು. ಮೂತ್ರ ವಿಸರ್ಜನೆಗೆ ಹಣ ಪಡೆಯುವಂತಿಲ್ಲ’ ಎಂದು ಸೂಚಿಸಲಾಗಿದೆ. ಆದರೆ, ಈ ಆದೇಶ ಗಾಳಿಗೆ ತೂರಿ ಶೌಚಕ್ಕೆ ₹10, ಮೂತ್ರ ವಿಸರ್ಜನೆಗಾಗಿ ₹5 ಪಡೆಯುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ, ಗುತ್ತಿಗೆ ಪಡೆದವರ ಸಿಬ್ಬಂದಿಯು ಪ್ರಯಾಣಿಕರೊಂದಿಗೆ ವಾಗ್ವಾದ ನಡೆಸುವುದು ಕಂಡುಬರುತ್ತಿದೆ.

‘ಎಲ್ಲ ವೇಳೆಯೂ ನಮ್ಮ ಕಡೆ ಹೆಚ್ಚು ಹಣ ಇರುವುದಿಲ್ಲ. ಹೀಗಿರುವಾಗ ಶೌಚಕ್ಕೆ ₹10 ನೀಡಬೇಕೆಂದರೆ ಪರದಾಡುವಂತಾಗುತ್ತದೆ. ಬಯಲು ಆಶ್ರಯಿಸುವುದು ಅನಿವಾರ್ಯವಾಗುತ್ತದೆ. ಶೌಚಕ್ಕೆ ₹2 ಮಾತ್ರ ಪಡೆಯುವಂತೆ ಗುತ್ತಿಗೆದಾರರಿಗೆ ಮತ್ತೊಮ್ಮೆ ನಿರ್ದೇಶನ ಕೊಡಬೇಕು. ಇಲ್ಲದಿದ್ದರೆ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು’ ಎಂದು ಪ್ರಯಾಣಿಕರು ಒತ್ತಾಯಿಸುತ್ತಾರೆ. 

‘ಗುತ್ತಿಗೆದಾರರ ಬದಲಿಸಲು ಕ್ರಮ’

‘ಶೌಚಕ್ಕೆ ₹2 ಮತ್ತು ಮೂತ್ರ ವಿಸರ್ಜನೆಗೆ ಯಾವುದೇ ಶುಲ್ಕ ಪಡೆಯಬಾರದೆಂದು ಗುತ್ತಿಗೆದಾರರಿಗೆ ನಿರ್ದೇಶನ ನೀಡಿದ್ದೇವೆ. ಆದರೆ, ಹೆಚ್ಚು ಶುಲ್ಕ ಪಡೆಯುತ್ತಿರುವ ಬಗ್ಗೆ ಪ್ರಯಾಣಿಕರಿಂದ ದೂರು ಬಂದಿದ್ದವು. ನಾವು ಪರಿಶೀಲಿಸಿದಾಗ ಅದು ದೃಢಪಟ್ಟಿದೆ. ಶೀಘ್ರ ಗುತ್ತಿಗೆದಾರರನ್ನು ಬದಲಿಸಲು ಕ್ರಮ ವಹಿಸಲಾಗುವುದು’ ಎಂದು ಎನ್‌ಡಬ್ಲ್ಯುಕೆಆರ್‌ಟಿಸಿ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ ಹುದ್ದಾರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. 

ಬಸ್‌ ನಿಲ್ದಾಣಗಳಲ್ಲಿನ ಶೌಚಗೃಹ ಬಳಸುವವರಿಂದ ನಿಯಮಾನುಸಾರ ಶುಲ್ಕ ಪಡೆಯಬೇಕು. ಹೆಚ್ಚು ಹಣ ಪಡೆಯುವುದು ಸರಿಯಲ್ಲ
ಸುರೇಶ ದಾನಶೆಟ್ಟಿ, ಪ್ರಯಾಣಿಕ ಹುಲಕುಂದ
ಶೌಚಗೃಹಗಳ ನಿರ್ವಹಣೆ ಗುತ್ತಿಗೆ ಪಡೆದವರು ಹೆಚ್ಚು ಹಣ ಪಡೆಯುತ್ತಿದ್ದು, ಸಾರಿಗೆ ಸಂಸ್ಥೆ ಅಧಿಕಾರಿಗಳು ಇದರಲ್ಲಿ ಭಾಗಿಯಾದ ಸಂಶಯ ಮೂಡಿದೆ
ಮೈನೋದ್ದೀನ್‌ ಮಕಾನದಾರ, ಕನ್ನಡ ಹೋರಾಟಗಾರ, ಬೆಳಗಾವಿ
ಬೆಳಗಾವಿ ಬಸ್‌ ನಿಲ್ದಾಣದಲ್ಲಿ ಯಾವುದೇ ನಿಯಮಕ್ಕೆ ಬೆಲೆ ಇಲ್ಲ. ಸರ್ಕಾರಿ ಆದೇಶಗಳು ಕಡತಕ್ಕೆ ಸೀಮಿತವಾಗಿವೆ
ರಾಜಶೇಖರ ತಳವಾರ, ಸಾಮಾಜಿಕ ಕಾರ್ಯಕರ್ತ ಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.