ADVERTISEMENT

ಸೀಡ್‌ ಬಾಲ್‌ ತಯಾರಿಕಾ ತರಬೇತಿ ಶೀಘ್ರ

ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಆಯೋಜಿಸುವ ಚಿಂತನೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2019, 13:11 IST
Last Updated 9 ಜೂನ್ 2019, 13:11 IST

ಬೆಳಗಾವಿ: ‘ಮಕ್ಕಳಲ್ಲಿ ಪರಿಸರ ಕಾಳಜಿ ಮೂಡಿಸಲು ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸುವ ಉದ್ದೇಶದಿಂದ ಅರಣ್ಯ ಇಲಾಖೆಯಿಂದ ಶೀಘ್ರದಲ್ಲೇ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಸೀಡ್‌ ಬಾಲ್‌ ತಯಾರಿಕಾ ತರಬೇತಿಯನ್ನು ಆಯೋಜಿಸುವ ಚಿಂತನೆ ಇದೆ’ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೆಲವು ಸಂಘ–ಸಂಸ್ಥೆಗಳು ಶಾಲೆಗಳಲ್ಲಿ ಈ ಕಾರ್ಯಕ್ರಮವನ್ನು ಸಂಘಟಿಸುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಇದನ್ನು ಇಲಾಖೆಯಿಂದ ಸಂಘಟಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತಿದೆ’ ಎಂದರು.

13 ಪ್ರಾಣಿಗಳ ಅಮದು:‘ಭೂತರಾಮನಟ್ಟಿ ಕಿರು ಮೃಗಾಲಯದ ಸುತ್ತಲೂ ಕಾಂಪೌಂಡ್‌ ನಿರ್ಮಿಸುವ ಕಾಮಗಾರಿ ಮುಗಿಯುವ ಹಂತದಲ್ಲಿದೆ. ಮುಂದಿನ 2–3 ತಿಂಗಳಲ್ಲಿ ಮೃಗಾಲಯಕ್ಕೆ ಹುಲಿ ಸೇರಿದಂತೆ 13 ವಿವಿಧ ಪ್ರಾಣಿಗಳು ಬರಲಿವೆ. ಇಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದ್ದು, ಮೈಸೂರು ಮೃಗಾಲಯದ ನಂತರದ ಸ್ಥಾನವನ್ನು ಈ ಮೃಗಾಲಯ ಪಡೆಯಲಿದೆ’ ಎಂದು ತಿಳಿಸಿದರು.

ADVERTISEMENT

‘ಮಳೆಯ ಕೊರತೆಯಿಂದ ನಗರದ ಜನರಿಗೆ ಕುಡಿಯುವ ನೀರಿನ ತೊಂದರೆಯಾಗುವುದಿಲ್ಲ. ರಕ್ಕಸಕೊಪ್ಪ ಜಲಾಶಯದಲ್ಲಿಯೂ ನೀರು ಇದೆ ಹಾಗೂ ಹಿಡಕಲ್‌ ಡ್ಯಾಂನಲ್ಲಿಯೂ ನೀರು ಇದೆ’ ಎಂದು ಹೇಳಿದರು.

ಹೈಕಮಾಂಡ್‌ ನಿರ್ಧಾರ:‘ಸಂಪುಟ್‌ ಪುನರ್‌ ರಚನೆಯಲ್ಲಿ ಕಾಂಗ್ರೆಸ್‌ ಶಾಸಕರಿಗೆ ಮಂತ್ರಿ ಸ್ಥಾನ ನೀಡುವುದು, ಬಿಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.