ADVERTISEMENT

ಸ್ವಂತ ಖರ್ಚಿನಲ್ಲಿ ಯಂತ್ರಗಳ ಪೂರೈಕೆ

ಸೋಂಕಿತರಿಗೆ ಶಾಸಕರಾದ ಅಭಯ, ಅನಿಲ ನೆರವು

​ಪ್ರಜಾವಾಣಿ ವಾರ್ತೆ
Published 5 ಮೇ 2021, 14:26 IST
Last Updated 5 ಮೇ 2021, 14:26 IST
ಬಿಜೆಪಿ ಶಾಸಕರಾದ ಅಭಯ ಪಾಟೀಲ ಮತ್ತು ಅನಿಲ ಬೆನಕೆ ಬೆಳಗಾವಿಯಲ್ಲಿ ಮಹಾನಗರಪಾಲಿಕೆಯಿಂದ ಆರಂಭಿಸಿರುವ ಮೂರು ಕೋವಿಡ್ ಕೇರ್ ಕೇಂದ್ರಗಳಿಗೆ ಸ್ವಂತ ಖರ್ಚಿನಲ್ಲಿ ಆಮ್ಲಜನಕ ಪೂರೈಕೆ ಯಂತ್ರಗಳನ್ನು ನೀಡಲು ಯೋಜಿಸಿದ್ದು, ಮೊದಲ ಹಂತದಲ್ಲಿ ಸುಭಾಷ್‌ ನಗರ ಕೇಂದ್ರಕ್ಕೆ ಹತ್ತನ್ನು ಬುಧವಾರ ಅಧಿಕಾರಿಗಳಿಗೆ ಹಸ್ತಾಂತರಿಸಿದರು
ಬಿಜೆಪಿ ಶಾಸಕರಾದ ಅಭಯ ಪಾಟೀಲ ಮತ್ತು ಅನಿಲ ಬೆನಕೆ ಬೆಳಗಾವಿಯಲ್ಲಿ ಮಹಾನಗರಪಾಲಿಕೆಯಿಂದ ಆರಂಭಿಸಿರುವ ಮೂರು ಕೋವಿಡ್ ಕೇರ್ ಕೇಂದ್ರಗಳಿಗೆ ಸ್ವಂತ ಖರ್ಚಿನಲ್ಲಿ ಆಮ್ಲಜನಕ ಪೂರೈಕೆ ಯಂತ್ರಗಳನ್ನು ನೀಡಲು ಯೋಜಿಸಿದ್ದು, ಮೊದಲ ಹಂತದಲ್ಲಿ ಸುಭಾಷ್‌ ನಗರ ಕೇಂದ್ರಕ್ಕೆ ಹತ್ತನ್ನು ಬುಧವಾರ ಅಧಿಕಾರಿಗಳಿಗೆ ಹಸ್ತಾಂತರಿಸಿದರು   

ಬೆಳಗಾವಿ: ಇಲ್ಲಿನ ಬಿಜೆಪಿ ಶಾಸಕರಾದ ಅಭಯ ಪಾಟೀಲ ಮತ್ತು ಅನಿಲ ಬೆನಕೆ ಅವರು ಮಹಾನಗರಪಾಲಿಕೆಯಿಂದ ಆರಂಭಿಸಿರುವ ಮೂರು ಕೋವಿಡ್ ಕೇರ್ ಕೇಂದ್ರಗಳಿಗೆ ₹ 25 ಲಕ್ಷ ಸ್ವಂತ ಖರ್ಚಿನಲ್ಲಿ ಆಮ್ಲಜನಕ ಪೂರೈಕೆ ಯಂತ್ರಗಳನ್ನು ನೀಡಲು ಯೋಜಿಸಿದ್ದು, ಮೊದಲ ಹಂತದಲ್ಲಿ ಸುಭಾಷ್‌ ನಗರ ಕೇಂದ್ರಕ್ಕೆ ಹತ್ತನ್ನು ಬುಧವಾರ ಅಧಿಕಾರಿಗಳಿಗೆ ಹಸ್ತಾಂತರಿಸಿದರು.

ಲಕ್ಷಣರಹಿತ ಕೋವಿಡ್ ಸೋಂಕಿತರಿಗೆ ತಾತ್ಕಾಲಿಕವಾಗಿ ಆಕ್ಸಿಜನ್ ಒದಗಿಸುವಂತಹ ಆಮ್ಲಜನಕ ಕಾನ್‌ಸನ್ಟ್ರೇಟರ್‌ಗಳು ಇವಾಗಿವೆ. ಸುಭಾಷ್ ನಗರದಲ್ಲಿ ದೇವರಾಜ ಅರಸು ವಸತಿನಿಲಯದ ಕೇಂದ್ರಕ್ಕೆ ನೀಡಲಾಗಿದೆ. ಈ ಮೂಲಕ ಸೋಂಕಿತರ ನೆರವಿಗೆ ಬಂದಿದ್ದಾರೆ.

ನಗರದಲ್ಲಿ ಕೋವಿಡ್ ಸೋಂಕು‌ ವ್ಯಾಪಕವಾಗಿ ಹರಡುತ್ತಿರುವುದಲ್ಲದೇ ಲಕ್ಷಣರಹಿತ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ತಕ್ಷಣವೆ ಹಾಸಿಗೆಗಳು ಸಿಗದಿರುವುದನ್ನು ಗಮನಿಸಿದ ಶಾಸಕರು ತಾತ್ಕಾಲಿಕ ಕ್ರಮಕ್ಕೆ ಸಹಕಾರ ನೀಡಿದ್ದಾರೆ. ಶೇ 85ರಿಂದ ಶೇ 90ರಷ್ಟು ಸ್ಯಾಚ್ಯುರೇಷನ್ ಇದ್ದಂತಹ‌ ಸೋಂಕಿತರಿಗೆ ತಾತ್ಕಾಲಿಕವಾಗಿ ಆಮ್ಲಜನಕ ಒದಗಿಸುವ ಮೂಲಕ ಅವರ ಆರೋಗ್ಯ ಸ್ಥಿತಿ ಸ್ಥಿರಗೊಳಿಸಲು ಈ ಯಂತ್ರಗಳು ಉಪಯುಕ್ತವಾಗಲಿವೆ. ಒಂದರ ಮೂಲಕ ಇಬ್ಬರಿಗೆ ಆಮ್ಲಜನಕ ಸೌಲಭ್ಯ ಕಲ್ಪಿಸಬಹುದು.

ADVERTISEMENT

‘ಒಟ್ಟು 25 ಯಂತ್ರಗಳ ಖರೀದಿಗೆ ಆದೇಶ ನೀಡಲಾಗಿದೆ.‌ ಇದಕ್ಕೆ ₹ 25 ಲಕ್ಷ ವೆಚ್ಚವಾಗಲಿದೆ. ಅವುಗಳನ್ನು ಕೋವಿಡ್ ಕೇರ್ ಕೇಂದ್ರಗಳಿಗೆ ಒದಗಿಸಲಾಗುವುದು. ಇವುಗಳಿಂದ 50 ಮಂದಿಗೆ ಆಮ್ಲಜನಕ ಸೌಲಭ್ಯ ಕಲ್ಪಿಸಬಹುದು’ ಎಂದು ಅಭಯ ಪಾಟೀಲ ತಿಳಿಸಿದರು.

ಮಹಾನಗರ ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್, ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ, ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಸಂಜಯ ಡುಮ್ಮಗೋಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.