ಬೆಳಗಾವಿ: ‘ಹಣೆಯಲ್ಲಿ ಬರೆದಿದ್ದರೆ ಶಾಸಕ ಉಮೇಶ ಕತ್ತಿ ಅವರೂ ಮುಂದೊಂದು ದಿನ ಉಪಮುಖ್ಯಮಂತ್ರಿ ಆಗಬಹುದು. ಯಾರಿಗೆ ಯಾವಾಗ ಅವಕಾಶ ಬರುತ್ತದೆ ಎನ್ನುವುದನ್ನು ಹೇಳಲಾಗದು’ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದದರು.
ಇಲ್ಲಿ ಪತ್ರಕರ್ತರೊಂದಿಗೆ ಭಾನುವಾರ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಾಗ ಕತ್ತಿ ಬೇರೆ ಕೆಲಸದಲ್ಲಿದ್ದರು. ಹೀಗಾಗಿ ಭೇಟಿಯಾಗಿಲ್ಲ. ಅವರೇನು ನಮ್ಮ ವೈರಿಯೇ? ಅವರೊಂದಿಗೆ ಸಂಪರ್ಕದಲ್ಲಿದ್ದೇನೆ’ ಎಂದು ತಿಳಿಸಿದರು.
‘ಶಾಸಕ ಡಾ.ಜಿ. ಪರಮೇಶ್ವರ ಆಪ್ತಸಹಾಯಕ ರಮೇಶ್ ಆತ್ಮಹತ್ಯೆ ಪ್ರಕರಣಕ್ಕೆ ರಾಜಕೀಯ ಥಳಕು ಹಾಕಬಾರದು. ಈ ಹಿಂದೆ ಬಿಜೆಪಿ ನಾಯಕರ ಮೇಲೂ ಐಟಿ (ಆದಾಯ ತೆರಿಗೆ) ದಾಳಿ ನಡೆದಿವೆ. ತನಿಖಾ ಸಂಸ್ಥೆಗಳು, ಸಂಶಯ ಬರುವವರ ಮೇಲೆ ದಾಳಿ ನಡೆಸುತ್ತವೆ. ರಮೇಶ ಆತ್ಮಹತ್ಯೆಗೂ– ಐಟಿ ದಾಳಿಗೂ ಸಂಬಂಧವೇ ಇಲ್ಲ. ಸಮಗ್ರ ತನಿಖೆ ನಂತರ ಸತ್ಯ ಹೊರಬರಲಿದೆ’ ಎಂದು ಪ್ರತಿಕ್ರಿಯಿಸಿದರು.
‘ಬಿಜೆಪಿ ಮುಖಂಡ ರಾಜು ಕಾಗೆ ಅವರು ‘ಕಾಡಾ’ ಅಧ್ಯಕ್ಷ ಸ್ಥಾನ ತಿರಸ್ಕರಿಸಿಲ್ಲ. ರಾಜ್ಯಮಟ್ಟದಲ್ಲಿ ಕೆಲಸ ಮಾಡಲು ಬೇರೆ ಸ್ಥಾನ ನೀಡುವಂತೆ ತಿಳಿಸಿದ್ದಾರೆ. ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.