ಹುಕ್ಕೇರಿ/ ಬೆಳಗಾವಿ: ನಕಲಿ ಎಟಿಎಂ ಕಾರ್ಡ್ ಬಳಸಿ, ನಾಲ್ಕು ಜನರ ಎಸ್ಬಿಐ ಬ್ಯಾಂಕ್ ಖಾತೆಯಿಂದ ₹ 3.34 ಲಕ್ಷ ಹಣ ಲಪಟಾಯಿಸಿದ ಪ್ರಕರಣ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ದಾಖಲಾಗಿದೆ.
ಪಟ್ಟಣದ ನಿವಾಸಿ ಕಾಶಪ್ಪ ಶಿವಮೂರ್ತಿ ಹರಿಜನ ಅವರು ತಮ್ಮ ಬ್ಯಾಂಕ್ ಖಾತೆಯಿಂದ ₹ 90,000 ಹಣವನ್ನು ಪುಣೆಯಲ್ಲಿರುವ ಎಟಿಎಂ ಕೇಂದ್ರದಿಂದ ಲಪಟಾಯಿಸಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕಾಶಪ್ಪ ಅವರಲ್ಲದೇ, ಮಾಜಿ ಸೈನಿಕ, ನಿವೃತ್ತ ಅಧಿಕಾರಿ ಹಾಗೂ ಖಾಸಗಿ ಕಂಪನಿಯ ಉದ್ಯೋಗಿಯ ಖಾತೆಯಿಂದಲೂ ಹಣ ಎಗರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಗಾವಿಯ ಶನಿವಾರ ಕೂಟದಲ್ಲಿರುವ ಎಟಿಎಂ, ಕೊಲ್ಹಾಪುರದ ದಾಬೋಲ್ಕರ್ ವೃತ್ತದಲ್ಲಿರುವ ಎಟಿಎಂ ಹಾಗೂ ಕೋಲ್ಕತ್ತಾದ ಎಟಿಎಂದಿಂದ ಹಣವನ್ನು ತೆಗೆದಿರುವುದು ಬೆಳಕಿಗೆ ಬಂದಿದೆ. ಪ್ರಕರಣವನ್ನು ಬೆಳಗಾವಿಯ ಸೈಬರ್ ಕ್ರೈಂ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.