ADVERTISEMENT

ಅಲತಗಾದಲ್ಲಿ ಅವೈಜ್ಞಾನಿಕ ಗಣಿಗಾರಿಕೆ: ಆರೋಪ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2021, 14:52 IST
Last Updated 25 ಫೆಬ್ರುವರಿ 2021, 14:52 IST

ಬೆಳಗಾವಿ: ‘ಹೊರವಲಯದ ಸಹ್ಯಾದ್ರಿ ನಗರ ಸಮೀಪದಲ್ಲಿರುವ ಅಲತಗಾ ಗ್ರಾಮದಲ್ಲಿ ಎರಡು ವರ್ಷಗಳಿಂದ ಅವೈಜ್ಞಾನಿಕವಾಗಿ ಗಣಿಗಾರಿಕೆ ನಡೆಯುತ್ತಿದೆ. ಮಧ್ಯಾಹ್ನ 2ರ ಸುಮಾರಿಗೆ ಘಟಕದಲ್ಲಿ ಸ್ಫೋಟ ಮಾಡುವುದರಿಂದ ನಮ್ಮ ಬಡಾವಣೆಯಲ್ಲಿನ ಮನೆಗಳ ಗಾಜುಗಳು ಅಲುಗಾಡುತ್ತವೆ. ಗೋಡೆಗಳು ಬಿರುಕುಬಿಟ್ಟಿವೆ’ ಎಂಬ ದೂರು ಸ್ಥಳೀಯರಿಂದ ಬಂತು.

ನಗರದ ಎಪಿಎಂಸಿ ಠಾಣೆಯ ಆವರಣದಲ್ಲಿ ಗುರುವಾರ ನಡೆದ ಜನಸಂಪರ್ಕ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಹ್ಯಾದ್ರಿ ನಗರದ ನಿವಾಸಿ, ಆ ಗಣಿಗಾರಿಕೆಯಿಂದ ಆಗುತ್ತಿರುವ ತೊಂದರೆಗಳ ಕುರಿತು ಮುಖ್ಯಮಂತ್ರಿಗೂ ದೂರು ಸಲ್ಲಿಸಿದ್ದೇವೆ. ಆದರೂ ಪ್ರಯೋಜನ ಆಗಿಲ್ಲ. ಇನ್ನಾದರೂ ಗಮನಹರಿಸಿ ನಾವು ನೆಮ್ಮದಿಯಿಂದ ಜೀವನ ನಡೆಸಲು ಅನುಕೂಲ ಮಾಡಿಕೊಡಬೇಕು’ ಎಂದು ಕೋರಿದರು.

‘ಈ ಭಾಗದಲ್ಲಿ ಸಿಪಿಐ ಜಾವೇದ್ ಮುಶಾಪುರೆ ನೇತೃತ್ವದಲ್ಲಿ ಪೊಲೀಸರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಇದ್ದು, ಅದನ್ನು ಪರಿಹರಿಸಬೇಕು. ಬಾಕ್ಸೈಟ್ ರೋಡ್ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಸ್ಮಾರ್ಟ್‌ ಸಿಟಿ ಕೆಲಸ ನಿಧಾನಗತಿಯಲ್ಲಿ ನಡೆದಿದೆ. ಇದರಿಂದ ಸುಗಮ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಆಯಾ ಕಾಮಗಾರಿ ಸ್ಥಳದಲ್ಲಿ ಸಂಚಾರ ಪೊಲೀಸರನ್ನು ನಿಯೋಜಿಸಬೇಕು’ ಎಂದು ಸ್ಥಳೀಯರು ಕೋರಿದರು.

ADVERTISEMENT

‘ಆಜಂ ನಗರದಲ್ಲಿ ಟ್ರಾಫಿಕ್ ಸಿಗ್ನಲ್ ಬಂದ್ ಆಗಿದೆ. ಬಸ್‍ ನಿಲ್ದಾಣ ಕೂಡ ಇಲ್ಲ. ಇದರಿಂದ ಜನರು ರಸ್ತೆಯಲ್ಲಿ ನಿಲ್ಲುವ ಪರಿಸ್ಥಿತಿ ಇದೆ’ ಎಂದು ತಿಳಿಸಿದರು.

‘ಕೆಲವು ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಲು ಕ್ರಮ ವಹಿಸಲಾಗುವುದು. ವ್ಯಾಪ್ತಿಗೆ ಬಾರದಿರುವ ವಿಷಯವನ್ನು ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ತರುತ್ತೇವೆ’ ಎಂದು ಡಿಸಿಪಿ ವಿಕ್ರಂ ಅಮಟೆ ಭರವಸೆ ನೀಡಿದರು.

‘ಸಾರ್ವಜನಿಕರು, ತುರ್ತು ಸಂದರ್ಭದಲ್ಲಿ 112 ಸಹಾಯವಾಣಿಗೆ ಕರೆ ಮಾಡಬೇಕು. ತಕ್ಷಣ ಪೊಲೀಸರು ಸ್ಪಂದಿಸುತ್ತಾರೆ. ಸುರಕ್ಷತೆ ದೃಷ್ಟಿಯಿಂದ ಗಲ್ಲಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಳ್ಳಲು ನಿವಾಸಿಗಳು ಮುಂದಾಗಬೇಕು’ ಎಂದು ಸಲಹೆ ನೀಡಿದರು.

‘ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದರು.

ಮಾರ್ಕೆಟ್ ಎಸಿಪಿ ಸದಾಶಿವ ಕಟ್ಟೀಮನಿ, ಟ್ರಾಫಿಕ್ ಎಸಿಪಿ ಶರಣಪ್ಪ, ಸಿಪಿಐ ಜಾವೇದ್ ಮುಶಾಪುರೆ, ಟ್ರಾಫಿಕ್ ಸಿಪಿಐ ಶ್ರೀಶೈಲ್ ಛಬ್ಬಿ, ನಿವಾಸಿಗಳು, ವಿವಿಧ ಸಮಾಜದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.