ಬೆಳಗಾವಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸುಮಾರು 4,000 ಬಸ್ಸುಗಳಲ್ಲಿ ಯುಪಿಐ ಪಾವತಿಯ ಮೂಲಕ ಟಿಕೆಟ್ ವಿತರಣಾ ಪಾಕ್ಷಿಕ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಮಾರ್ಚ್ 3ರಿಂದ 11ರವರೆಗೆ ಒಟ್ಟು 1.70 ಲಕ್ಷ ವಹಿವಾಟು ನಡೆದಿದ್ದು, ₹1.62 ಕೋಟಿ ಮೊತ್ತ ಸಂಗ್ರಹವಾಗಿದೆ.
ಚಿಕ್ಕೋಡಿ, ಹುಬ್ಬಳ್ಳಿ (ಗ್ರಾ) ಹಾಗೂ ಬಾಗಲಕೋಟೆ ವಿಭಾಗಗಳು ಅನುಕ್ರಮವಾಗಿ ಪ್ರತಿ ದಿನ ಅತಿ ಹೆಚ್ಚು ವಹಿವಾಟು ಮಾಡುತ್ತಿವೆ. ಗೋಕಾಕ, ಹುಬ್ಬಳ್ಳಿ ಗ್ರಾಮಾಂತರ ಘಟಕ–3, ಬೆಳಗಾವಿ 1ನೇ ಘಟಕ, ಹುಬ್ಬಳ್ಳಿ ಗ್ರಾಮಾಂತರ ಘಟಕ–2 ಹಾಗೂ ಮುಧೋಳ ಘಟಕಗಳು ಅನುಕ್ರಮವಾಗಿ ಪ್ರತಿ ದಿನ ಅತಿ ಹೆಚ್ಚು ವಹಿವಾಟು ಮಾಡುವ ಘಟಕಗಳಾಗಿವೆ.
ಪ್ರತಿ ದಿನ ಅತಿ ಹೆಚ್ಚು ವಹಿವಾಟು ಮಾಡಿದ ನಿರ್ವಾಹಕರಿಗೆ ನಗದು ಪುರಸ್ಕಾರ ಮತ್ತು ಪ್ರಶಂಸಾ ಪತ್ರ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲೂ ಇದೇ ರೀತಿ ಅತಿ ಹೆಚ್ಚು ವಹಿವಾಟು ಮಾಡುವ ವಿಭಾಗ, ಘಟಕ ಹಾಗೂ ನಿರ್ವಾಹಕರನ್ನು ಪ್ರೋತ್ಸಾಹಿಸಲಾಗುವುದು ಹಾಗೂ ಸಾರ್ವಜನಿಕ ಪ್ರಯಾಣಿಕರು ಯುಪಿಐ ಪಾವತಿ ಮೂಲಕ ಟಿಕೆಟ್ ಪಡೆಯುವ ಸದರಿ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್.ಭರತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.