ಬೆಳಗಾವಿ: ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದಿಂದ ಮಹಿಳೆಯರಿಗಾಗಿ ಇಲ್ಲಿನ ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಆಯೋಜಿಸಿರುವ ವಚನ ಸಂಗೀತ ಶಿಬಿರಕ್ಕೆ ಚಾಲನೆ ದೊರೆತಿದೆ.
ಉದ್ಘಾಟಿಸಿದ ಸಂಗೀತ ವಿದ್ವಾಂಸ ವಿಜಯಕುಮಾರ ತೇಲಿ ಅವರು ಸಂಗೀತ ಕಲೆಯ ಸ್ವರೂಪ, ಉದ್ದೇಶ, ಪ್ರಯೋಜನಗಳೊಂದಿಗೆ ವಿವಿಧ ಸಂಗೀತ ಪ್ರಕಾರಗಳ ಶಾಸ್ತ್ರೀಯ ವಿವರಣೆಯನ್ನು ನೀಡಿದರು. 40 ಶಿಬಿರಾರ್ಥಿಗಳ ಧ್ವನಿ ಪರೀಕ್ಷೆ ಮಾಡಿದರು. ಶಿಬಿರದ ಮುಂದಿನ ಹತ್ತು ದಿನಗಳಲ್ಲಿ ಶರಣರ ವಚನ, ರಂಗ ಗೀತೆ, ಜನಪದ ಗೀತೆಗಳನ್ನು, ತಾಳ ಲಯ ಸ್ವರೂಪ ಸಂಯೋಜನೆ, ವಾದ್ಯಗಳೊಂದಿಗೆ ಕಲಿಸುವುದಾಗಿ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಮಾತನಾಡಿ, ‘ಮಹಿಳೆಯರಿಗೆ ನೀಡುತ್ತಿರುವ ಸಂಗೀತ ಸಂಸ್ಕಾರವು ಇಂದಿನ ಅಗತ್ಯವಾಗಿದೆ. ಸಂಗೀತವು ಮನಸ್ಸು ಹಾಗೂ ಭಾವನೆಗಳನ್ನು ತಿಳಿಗೊಳಿಸುತ್ತದೆ. ವಚನ ಸಂಗೀತ ಶಿಬಿರ ಆಯೋಜಿಸುವ ಮೂಲಕ ಸಂಗೀತದ ಅಭಿರುಚಿಯನ್ನು ಹೆಚ್ಚಿಸುವುದು ನಮ್ಮ ಉದ್ದೇಶವಾಗಿದೆ’ ಎಂದರು.
ಮಹಾಸಭಾದ ಉಪಾಧ್ಯಕ್ಷೆ ಡಾ.ಗುರುದೇವಿ ಹುಲೆಪ್ಪನವರಮಠ, ಕಾರ್ಯದರ್ಶಿ ಪ್ರೊ.ಎ.ಬಿ. ಕೊರಬು ಇದ್ದರು.
ಜ್ಯೋತಿ ಭಾವಿಕಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಪ್ರತಿಭಾ ಕಳ್ಳಿಮಠ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.