ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು;
ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾ!
ಉಂಬ ಜಂಗಮ ಬಂದಡೆ ನಡೆಯೆಂಬರು;
ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ!
ನಮ್ಮ ಕೂಡಲಸಂಗನ ಶರಣರ ಕಂಡು
ಉದಾಸೀನವ ಮಾಡಿದಡೆ, ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯಾ
ನಾವು ಸಲ್ಲಿಸುವ ಭಕ್ತಿಯು ಶ್ರದ್ಧೆಯುಳ್ಳದ್ದಾಗಿರಬೇಕು. ಸದಾಕಾಲ ಸತ್ಪಥದಲ್ಲಿರಬೇಕು. ಅಜ್ಞಾನದಿಂದ ಕೂಡಿದ ಭಕ್ತಿಯು ನಮ್ಮನ್ನು ಮೂಢರನ್ನಾಗಿಸುತ್ತದೆ. ಅಗ ನಾವು ಮೂಢ ಆಚರಣೆಗಳಿಂದ ಭಗವಂತನಿಗೆ ನಮ್ಮ ಭಕ್ತಿಯನ್ನು ಪೂರೈಸುತ್ತೇವೆ. ಮೂಢವಾದ ನಮ್ಮ ಭಕ್ತಿಯಿಂದ ಏನೆಲ್ಲ ಅವಾಂತರಗಳನ್ನು ನಾವು ಮಾಡುತ್ತೇವೆ ಎಂಬುದನ್ನು ಬಸವಣ್ಣನವರು ಇಲ್ಲಿ ಉದಾಹರಣೆಗಳ ಸಮೇತ ತಿಳಿಸಿದ್ದಾರೆ.
ಕಲ್ಲಿನ ನಾಗರ ಮೂರ್ತಿಗೆ ಹಾಲನ್ನು ಎರೆಯುವ ನಾವು, ನಿಜವಾದ ಹಾವು ಕಂಡೊಡನೆ ಅದನ್ನು ಕೊಲ್ಲಲು ಪ್ರಯತ್ನಿಸುತ್ತೇವೆ. ಯಾರಾದರೂ ನಮ್ಮ ಮನೆಗೆ ಹಸಿವು ಎಂದು ಬಂದಾಗ ಅವರಿಗೆ ಅನ್ನ ಹಾಕದೆ, ಉಣ್ಣದ ಲಿಂಗಕ್ಕೆ ನೈವೇದ್ಯ ಹಿಡಿಯುತ್ತೇವೆ. ಸಂತರನ್ನು, ಶರಣರನ್ನು ಕಂಡು ನಾವು ಉಪೇಕ್ಷೆ ಮಾಡಿದರೆ ಮಣ್ಣಿನ ಹೆಂಟೆಯು ಕಲ್ಲಿಗೆ ತಾಗಿದಾಗ ಯಾವ ರೀತಿಯಾಗಿ ಪುಡಿ ಪುಡಿಯಾಗುವುದೋ ಹಾಗೆಯೇ ನಮ್ಮ ಅವಸ್ಥೆಯಾಗುತ್ತದೆ ಎನ್ನುವುದು ಈ ವಚನದ ಸಾರವಾಗಿದೆ.
-ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.