ಓಂ ನಮಃ ಶಿವಾಯ ಎಂಬ ಮಂತ್ರವ ಮೀರಲಮ್ಮದೆ ನಿಂದವು ವೇದ
ಓಂ ನಮಃ ಶಿವಾಯ ಎಂಬ ಮಂತ್ರವ ಮೀರಲಮ್ಮದೆ ನಿಂದವು ಶಾಸ್ತ್ರ
ಓಂ ನಮಃ ಶಿವಾಯ ಎಂಬ ಮಂತ್ರವ ಮೀರಲಮ್ಮದೆ ನಿಂದವು ತರ್ಕ
ಭಯಂಕರ ಭ್ರಮೆಗೊಂಡಿತ್ತು ಮಂತ್ರ-ತಂತ್ರ
ಶಿವನಂತುವನರಿಯದೆ ಚಿಂತಿಸುತ್ತಿದ್ದಿತ್ತು ಲೋಕ!
ಕೂಡಲಸಂಗಮದೇವ ಶ್ವಪಚನ ಮೆರೆದಡೆ ಜಾತಿಭೇದವ ಮಾಡಲಮ್ಮವು.
ಶಿವನ ನಾಮಸ್ಮರಣೆಯ ಶ್ರೇಷ್ಠತೆಯನ್ನು ಇಲ್ಲಿ ಕಾಣಬಹುದು. ಶಿವನ ಸ್ಮರಣೆಯು ವೇದ, ಶಾಸ್ತ್ರ, ತರ್ಕಗಳಿಗೆ ಮೀರಿದುದಾಗಿದೆ. ವೇದವು ಶಬ್ದ ಪ್ರಮಾಣವಾಗಿದ್ದು, ಎಲ್ಲಕ್ಕಿಂತ ಮೂಲ ಎನ್ನುತ್ತಾರೆ. ಅದಕ್ಕಿಂತಲೂ ಮೂಲವಾದುದು ನಿರಾಕಾರ ಸೃಷ್ಟಿಕರ್ತ ಪರಮಾತ್ಮನಾಗಿದ್ದಾನೆ. ಶಾಸ್ತ್ರವು ವೈಚಾರಿಕವಾದುದು; ಪ್ರತಿಯೊಂದರ ಕುರಿತು ವಿವರವಾಗಿ ಚಿಂತನೆ ಮಾಡುತ್ತದೆ. ಇಂತಹ ಶಾಸ್ತ್ರಕ್ಕೂ ಪರಶಿವನ ಶಕ್ತಿಯ ಕುರಿತಾದ ಅರಿವು ಸಾಧ್ಯವಾಗಿಲ್ಲ. ತರ್ಕವು ಬೌದ್ಧಿಕವಾದುದು. ಪ್ರತಿಯೊಂದರ ಕುರಿತಾಗಿ ಆಮೂಲಾಗ್ರವಾಗಿ ಆಲೋಚನೆ ಮಾಡುತ್ತದೆ. ಅಂತಹ ತರ್ಕಕ್ಕೂ ನಿಲುಕಲಾರದುದು ಶಿವನ ಸ್ಮರಣೆ. ಮನುಷ್ಯನ ಸಾಧನಾ ಸಿದ್ಧಿಗಳು ಮಂತ್ರ-ತಂತ್ರಗಳನ್ನು ಅವಲಂಬಿಸಿವೆ. ಇಂತಹ ಮಂತ್ರ-ತಂತ್ರಗಳಿಗೂ ಶಿವನ ನೆಲೆ ತಿಳಿಸಿಕೊಡಲು ಸಾಧ್ಯವಾಗುತ್ತಿಲ್ಲ. ಶಿವನ ನೆಲೆ ಅರಿಯಲು ಈ ಲೋಕ ಪರದಾಡುತ್ತಿದೆ. ಆತ ಅಸ್ಪೃಶ್ಯನಾದ ಶ್ವಪಚಯ್ಯನಿಗೆ ಒಲಿದಿದ್ದಾನೆ. ಶ್ವಪಚಯ್ಯನಿಗೆ ಒಲಿಯಲು ಶಿವನ ಸ್ಮರಣೆಯನ್ನು ಸದಾ ಕಾಲ ಕಾಯಾ–ವಾಚಾ–ಮನಸಾ ಮಾಡಿದುದು ಕಾರಣವಾಗಿದೆ. ಶಿವನ ಸ್ಮರಣೆಗೆ ಜಾತಿ ಭೇದಗಳು ಅಡ್ಡಿಯಾಗವು ಎನ್ನುವುದು ಈ ಮೇಲಿನ ವಚನದ ತಾತ್ಪರ್ಯವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.