ಧರಣಿಯ ಮೇಲೊಂದು ಹಿರಿದಪ್ಪ ಅಂಗಡಿಯನಿಕ್ಕಿ,
ಹರದ ಕುಳ್ಳಿರ್ದ ನಮ್ಮ ಮಹಾದೇವ ಶೆಟ್ಟಿ
ಒಮ್ಮನವಾದಡೆ ಒಡನೆ ನುಡಿವನು; ಇಮ್ಮನವಾದಡೆ ನುಡಿಯನು.
ಕಾಣಿಯ ಸೋಲ, ಅರ್ಧಗಾಣಿಯ ಗೆಲ್ಲ.
ಜಾಣ ನೋಡವ್ವಾ, ನಮ್ಮ ಕೂಡಲಸಂಗಮ ದೇವ!
ಸೃಷ್ಟಿಕರ್ತ ಪರಮಾತ್ಮನು ಈ ಭೂಮಿಯ ಮೇಲೆ ಸಂಸಾರವೆಂಬ ಅಂಗಡಿಯನ್ನು ನಡೆಸುವ ಮಾಲೀಕನಾಗಿದ್ದಾನೆ. ಅವನು ದೊಡ್ಡದಾದ ಅಂಗಡಿಯನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾನೆ. ಒಳ್ಳೆಯ ಮನಸ್ಸಿನಿಂದ, ಏಕಭಾವನೆಯಿಂದ ಆತನ ಹತ್ತಿರ ಹೋದರೆ ಒಳಿತನ್ನೆ ಮಾಡುತ್ತಾನೆ. ಅಂತರಂಗ, ಬಹಿರಂಗ ಶುದ್ಧವಾಗಿರದೆ ಹೋದರೆ ಆತನ ಕೃಪೆ ದೊರೆಯುವುದು ಸಾಧ್ಯವಿಲ್ಲ. ಸತ್ಯ, ಪ್ರೇಮ, ತ್ಯಾಗ, ಸೇವಾ ಮನೋಭಾವ ಇವುಗಳನ್ನು ಒಳಗೊಂಡ ವ್ಯಕ್ತಿಗೆ ಭಗವಂತನ ಸಾಕ್ಷಾತ್ಕಾರ ಆಗುತ್ತದೆ. ಕಾಣಿಯ ಸೋಲ, ಅರ್ಧಗಾಣಿಯ ಗೆಲ್ಲ ಎಂದರೆ ಭಗವಂತನಿಗೆ ಹೆಚ್ಚಿನ ಅಪೇಕ್ಷೆಯು ಇಲ್ಲ; ಡಾಂಭಿಕವಾದ ಭಕ್ತಿಯ ಅವಶ್ಯಕತೆಯೂ ಇಲ್ಲ. ಸಕಲವನ್ನೂ ಮತ್ತು ಸರ್ವವನ್ನೂ ತಿಳಿದಿರುವ ಆತನೇ ಶ್ರೇಷ್ಠ ಎನ್ನುವುದು ಈ ವಚನದ ಅರ್ಥವಾಗಿದೆ. ಇದಕ್ಕಾಗಿ ಭಗವಂತನಿಗೆ ನಮ್ಮ ಭಕ್ತಿಯು ಶುದ್ಧವಾಗಿರಬೇಕು.
ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.