ADVERTISEMENT

ನಿತ್ಯ ಜೀವನದಲ್ಲಿ ಹಾಸುಹೊಕ್ಕಾದ ಹಾಸ್ಯ: ಕವಿ ಜಿನದತ್ತ

ವಿದೇಶ ವಿನೋದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 12 ಮೇ 2019, 11:32 IST
Last Updated 12 ಮೇ 2019, 11:32 IST
ಬೆಳಗಾವಿಯಲ್ಲಿ ಭಾನುವಾರ ನಡೆದ ಹಾಸ್ಯ ಕಾರ್ಯಕ್ರಮದಲ್ಲಿ ಜಿನದತ್ತ ದೇಸಾಯಿ ಮಾತನಾಡಿದರು. ಎಸ್.ವಿ. ದೀಕ್ಷಿತ್, ಡಾ.ವಿ.ಎನ್. ಹೆಗಡೆ, ಸಿದ್ದನಗೌಡ ಪಾಟೀಲ, ಶಿವಾನಂದ ಝಿರ್ಲಿ, ಪ್ರೊ.ಜಿ.ಕೆ. ಕುಲಕರ್ಣಿ, ಗುಂಡೇನಟ್ಟಿ ಮಧುಕರ, ಜಿ.ಎಸ್. ಸೋನಾರ ಇದ್ದಾರೆ
ಬೆಳಗಾವಿಯಲ್ಲಿ ಭಾನುವಾರ ನಡೆದ ಹಾಸ್ಯ ಕಾರ್ಯಕ್ರಮದಲ್ಲಿ ಜಿನದತ್ತ ದೇಸಾಯಿ ಮಾತನಾಡಿದರು. ಎಸ್.ವಿ. ದೀಕ್ಷಿತ್, ಡಾ.ವಿ.ಎನ್. ಹೆಗಡೆ, ಸಿದ್ದನಗೌಡ ಪಾಟೀಲ, ಶಿವಾನಂದ ಝಿರ್ಲಿ, ಪ್ರೊ.ಜಿ.ಕೆ. ಕುಲಕರ್ಣಿ, ಗುಂಡೇನಟ್ಟಿ ಮಧುಕರ, ಜಿ.ಎಸ್. ಸೋನಾರ ಇದ್ದಾರೆ   

ಬೆಳಗಾವಿ: ‘ಭಾರತೀಯರಿಗೆ ನಗಲು ಬರುವುದಿಲ್ಲ ಎಂದು ಕೆಲವರು ಟೀಕಿಸುತ್ತಾರೆ. ಅದು ಸುಳ್ಳು. ನಾವು ನಗಬಲ್ಲೆವು; ನಗಿಸಬಲ್ಲೆವು. ಜನಪದ ಸಾಹಿತ್ಯ, ಪುರಾಣದ ಕಥೆ ಹಾಗೂ ಕೀರ್ತನೆಗಳನ್ನು ಗಮನಿಸಿದರೆ, ಹಾಸ್ಯ ಎನ್ನುವುದು ಭಾರತೀಯರ ನಿತ್ಯ ಜೀವನದಲ್ಲಿ ಹಾಸುಹೊಕ್ಕಾಗಿರುವುದು ಕಂಡುಬರುತ್ತದೆ’ ಎಂದು ಹಿರಿಯ ಕವಿ ಜಿನದತ್ತ ದೇಸಾಯಿ ಹೇಳಿದರು.

ಹಾಸ್ಯಕೂಟ ಹಾಗೂ ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ‘ವಿದೇಶ ವಿನೋದ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‌‘ಹಿಂದೆ ನಾವು ವಿದೇಶಕ್ಕೆ ಹೋಗುವುದೆಂದರೆ ನಮ್ಮ ಬಳಗದಲ್ಲಿ, ಸ್ನೇಹಿತರಲ್ಲಿ, ಸಂಬಂಧಿಕರಲ್ಲಿ ಸಂಭ್ರಮ ಉಂಟು ಮಾಡುತ್ತಿತ್ತು. ಅನೇಕ ಸಂಘ–ಸಂಸ್ಥೆಗಳವರು ಸನ್ಮಾನಿಸುತ್ತಿದ್ದರು. ವಿಚಿತ್ರವೆಂದರೆ ನವದೆಹಲಿಗೆ ಹೋದ ನಂತರವಷ್ಟೇ ಪಾಸ್‌ಪೋರ್ಟ್‌, ವೀಸಾ ಖಚಿತವಾಗುತ್ತಿತ್ತು. ವೀಸಾ ಸಿಗದೇ ಎಲ್ಲಿ ಮರಳಬೇಕಾಗುವುದೋ ಎಂಬ ಅಳಕು ಕೂಡ ಕಾಡುತ್ತಿರುತ್ತಿತ್ತು’ ಎಂದು ತಿಳಿಸಿದರು.

ADVERTISEMENT

‘ವೀಸಾ ಸಿಗದಿದ್ದರೆ ಏನು ಮಾಡುತ್ತೀರಿ ಎಂದು ಒಬ್ಬರು ಕೇಳಿದ್ದರು. ಸಂಘ ಸಂಸ್ಥೆಯವರ ಶಾಲು, ಮಾಲೆ ಖಂಡಿತವಾಗಿ ಮರಳಿಸುತ್ತೇನೆ ಎಂದಿದ್ದೆ’ ಎಂದು ಅವರು ಹೇಳಿದಾಗ ಎಂದಾಗ ನಗೆಯ ಎಲೆ ಎದ್ದಿತು.

ಪ್ರೊ.ಜಿ.ಕೆ. ಕುಲಕರ್ಣಿ ಲಂಡನ್ ಪ್ರವಾಸದ ಅನುಭವ ಹಂಚಿಕೊಂಡರು. ‘ಅಲ್ಲಿ ಕಾರಿನಲ್ಲಿರುವ ಜನ ಪಾದಾಚಾರಿಗಳನ್ನು ಗೌರವಿಸುತ್ತಾರೆ. ನಗುಮೊಗದ ಸಂಸ್ಕೃತಿಯನ್ನು ಅವರಿಂದ ಕಲಿಯಬೇಕು. ಪರಿಚಯವಿರಲಿ, ಇಲ್ಲದಿರಲಿ ಎಲ್ಲರೊಂದಿಗೆ ನಗುತ್ತಲೇ ಮಾತನಾಡುತ್ತಾರೆ. ನಗು ಅವರನ್ನು ಲವಲವಿಕೆ ಹಾಗೂ ಆರೋಗ್ಯವಂತರನ್ನಾಗಿ ಇಟ್ಟಿದೆ’ ಎಂದರು.

ಹುಕ್ಕೇರಿಯ ಗುರುಶಾಂತೇಶ್ವರ ಕಲಾ ಪೋಷಕ ಸಂಘದ ಅಧ್ಯಕ್ಷ ಶಿವಾನಂದ ಝಿರ್ಲಿ, ಹೋರಾಟಗಾರ ಸಿದ್ದನಗೌಡ ಪಾಟೀಲ, ಎಸ್.ವಿ. ದೀಕ್ಷಿತ, ಡಾ.ವಿ.ಎನ್. ಹೆಗಡೆ ಹಾಸ್ಯ ಪ್ರಸಂಗಗಳನ್ನು ಹಂಚಿಕೊಂಡರು.

ಲೇಖಕರಾದ ಆರ್.ಬಿ. ಕಟ್ಟಿ, ಅರವಿಂದ ಹುನಗುಂದ, ದೀಪಿಕಾ ಚಾಟೆ, ಅರವಿಂದ ಕಡಗದಕೈ, ಮದನ ಕಣಬೂರ ಇದ್ದರು.

ಗುಂಡೇನಟ್ಟಿ ಮಧುಕರ ಪ್ರಾಸ್ತಾವಿಕ ಮಾತನಾಡಿದರು. ಜಿ.ಎಸ್. ಸೋನಾರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.