ADVERTISEMENT

ಮರದ ಜನ್ಮದಿನ ಆಚರಣೆ, ಪರಿಸರ ಪ್ರಜ್ಞೆ ಮೆರೆದ ಶಿರಟಿ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2020, 19:30 IST
Last Updated 4 ಅಕ್ಟೋಬರ್ 2020, 19:30 IST
ಚಿಕ್ಕೋಡಿ ತಾಲ್ಲೂಕಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಶಿರೋಳ ತಾಲ್ಲೂಕಿನ ಶಿರಟಿ ಗ್ರಾಮದಲ್ಲಿ ಗಿಡವೊಂದರ ಜನ್ಮ ದಿನ ಆಚರಿಸಲಾಯಿತು
ಚಿಕ್ಕೋಡಿ ತಾಲ್ಲೂಕಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಶಿರೋಳ ತಾಲ್ಲೂಕಿನ ಶಿರಟಿ ಗ್ರಾಮದಲ್ಲಿ ಗಿಡವೊಂದರ ಜನ್ಮ ದಿನ ಆಚರಿಸಲಾಯಿತು   

ಚಿಕ್ಕೋಡಿ: ಪ್ರೀತಿಯಿಂದ ನೆಟ್ಟು ಪೋಷಿಸಿದ್ದ ಮರದ ಎಂಟನೇ ವರ್ಷದಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸುವ ಮೂಲಕ ಚಿಕ್ಕೋಡಿ ತಾಲ್ಲೂಕಿಗೆ ಹೊಂದಿಕೊಂಡಿರುವ ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲ್ಲೂಕಿನ ಶಿರಟಿ ಗ್ರಾಮಸ್ಥರು ಪರಿಸರ ಪ್ರೇಮ ಮೆರೆದಿದ್ದಾರೆ. ಇಂತಹದ್ದೊಂದು ಅಪರೂಪದ ಕಾರ್ಯಕ್ರಮ ಗಾಂಧಿ ಜಯಂತಿಯಂದು ನಡೆದಿದೆ.

ಉತ್ತರ ಕರ್ನಾಟಕ ಮತ್ತು ದಕ್ಷಿಣ ಮಹಾರಾಷ್ಟ್ರಗಳ ಸುಕ್ಷೇತ್ರ ನರಸಿಂಹವಾಡಿಯಿಂದ ಮೂರ್ನಾಲ್ಕು ಕಿ.ಮಿ.ಅಂತರದಲ್ಲಿರುವ ಶಿರಟಿ ಗ್ರಾಮದಲ್ಲಿ 2012ರಲ್ಲಿ ಜಿನಗೌಡ ನೇಮಗೌಡ ಪಾಟೀಲ ಎಂಬುವವರು ಗ್ರಾಮದ ಪ್ರಮುಖ ಬೀದಿಯೊಂದರಲ್ಲಿ ಗಾಂಧಿ ಜಯಂತಿಯಂದು ಸಸಿಯೊಂದನ್ನು ನೆಟ್ಟಿದ್ದರು. ಈಗ ಅದು ಮರವಾಗಿ ಬೆಳೆದು ನಿಂತಿದ್ದು, ಅದರ ಎಂಟನೇ ವರ್ಷದ ಹುಟ್ಟುಹಬ್ಬವನ್ನು ಗಾಂಧಿ ಜಯಂತಿಯಂದು ಗ್ರಾಮಸ್ಥರು ವಿಜೃಂಭಣೆಯಿಂದ ಆಚರಿಸಿದರು.

ಮುಖಂಡ ಶ್ರೀಪತಿ ಢೇಕಳೆ ಗಿಡಕ್ಕೆ ಪೂಜೆ ಸಲ್ಲಿಸಿದರು. ರಾಮಗೌಡ ಪಾಟೀಲ ಕೇಕ್ ಕತ್ತರಿಸಿ ಗಿಡದ ಜನ್ಮದಿನಕ್ಕೆ ಚಾಲನೆ ನೀಡಿದರು.

ADVERTISEMENT

ಮರದ ಬುಡದ ಸುತ್ತಲೂ ದೀಪಾಲಂಕಾರ ಮಾಡಿ, ಚಿತ್ತಾಕರ್ಷಕವಾದ ರಂಗೋಲಿ ಬಿಡಿಸಿ, ಹೂವು ಹಾರಗಳನ್ನು ತೊಡಿಸಿ, ಬುಡದಲ್ಲಿ ಗಾಂಧಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಂಭ್ರಮಿಸಿದರು. ವೃಕ್ಷ ಜನ್ಮ ದಿನದ ಸಮಾರಂಭದಲ್ಲಿ ಅಪಾರ ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.