ADVERTISEMENT

ವಿವೇಕಾನಂದ ರಥಯಾತ್ರೆ; ಜಿಲ್ಲೆಯಾದ್ಯಂತ ಸಂಚಾರ 16ರಿಂದ 21ರವರೆಗೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2018, 9:41 IST
Last Updated 13 ಅಕ್ಟೋಬರ್ 2018, 9:41 IST

ಬೆಳಗಾವಿ: ಸ್ವಾಮಿ ವಿವೇಕಾನಂದ ಅವರು ಶಿಕಾಗೊ ವಿಶ್ವಧರ್ಮ ಸಂಸತ್ತಿನಲ್ಲಿ ನೀಡಿದ ಭಾಷಣದ 125ನೇ ವರ್ಷದ ಸ್ಮರಣಾರ್ಥ ರಾಜ್ಯದಾದ್ಯಂತ ಆಯೋಜಿಸಲಾಗಿರುವ ರಥಯಾತ್ರೆಯು ಇದೇ ತಿಂಗಳ 16ರಿಂದ 21ರವರೆಗೆ ಬೆಳಗಾವಿ ಜಿಲ್ಲೆಯಾದ್ಯಂತ ಸಂಚರಿಸಲಿದೆ ಎಂದು ಆಯೋಜಕರಾದ ಯುವಾಬ್ರಿಗೇಡ್‌ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಇಲ್ಲಿನ ರಾಮಕೃಷ್ಣ ಮಿಷನ್‌ ಆಶ್ರಮದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 16ರಂದು ಬೆಳಿಗ್ಗೆ ಅಥಣಿ ಮೂಲಕ ಜಿಲ್ಲೆಯನ್ನು ರಥಯಾತ್ರೆ ಪ್ರವೇಶಿಸಲಿದೆ. ಆರು ದಿನಗಳ ಕಾಲ ಜಿಲ್ಲೆಯಾದ್ಯಂತ ಸಂಚರಿಸಿ, ಧಾರವಾಡ ಜಿಲ್ಲೆಯತ್ತ ಪ್ರಯಾಣಿಸಲಿದೆ ಎಂದರು.

ವಿವೇಕಾನಂದರು 1892ರ ಅಕ್ಟೋಬರ್‌ 16ರಿಂದ 27ರವರೆಗೆ ಬೆಳಗಾವಿಯಲ್ಲಿ ವಾಸವಾಗಿದ್ದರು. ಇದೇ ಅವಧಿಯಲ್ಲಿ ರಥಯಾತ್ರೆ ಆಯೋಜಿಸಿರುವುದು ವಿಶಿಷ್ಟವಾದುದು. ವಿವೇಕಾನಂದ ಅವರ ಸಂದೇಶಗಳನ್ನು ಯುವಕರಿಗೆ ತಲುಪಿಸಲು ರಥಯಾತ್ರೆ ಆಯೋಜಿಸಲಾಗಿದೆ ಎಂದು ಹೇಳಿದರು.

ADVERTISEMENT

20ರಂದು ಬೆಳಿಗ್ಗೆ 8.30ಕ್ಕೆ ಬೆಳಗಾವಿಯ ಆರ್‌ಎಲ್‌ಎಸ್‌ ಮೈದಾನದಿಂದ ರಾಮಕೃಷ್ಣ ಮಿಷನ್‌ ಆಶ್ರಮದವರೆಗೆ ಶೋಭಾಯಾತ್ರೆ ಆಯೋಜಿಸಲಾಗಿದೆ. ಆಶ್ರಮದಲ್ಲಿ 10.30ಕ್ಕೆ ಸಭಾ ಕಾರ್ಯಕ್ರಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸರಿಸುಮಾರು 1,000 ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ರಾಮಕೃಷ್ಣ ಮಿಷನ್‌ ಆಶ್ರಮದ ಕಾರ್ಯದರ್ಶಿ ಸ್ವಾಮಿ ಆತ್ಮಪ್ರಾಣಾನಂದ ಮಾತನಾಡಿ, ಆಶ್ರಮದಲ್ಲಿ 20 ಹಾಗೂ 21ರಂದು ಸಂಜೆ 6.30ರಿಂದ 8.30ರವರೆಗೆ ಭಜನೆಗಳನ್ನು ಆಯೋಜಿಸಲಾಗಿದೆ. 27ರಂದು ಸಂಜೆ ಸಂಜಯ ದೇಶಪಾಂಡೆ ಅವರಿಂದ ಸಿತಾರ ವಾದನ, 28ರಂದು ಸಂಜೆ ಬಾಲಚಂದ್ರ ನಾಕೋಡ ಅವರು ಹಿಂದೂಸ್ಥಾನಿ ಗಾಯನ ಪ್ರಸ್ತುತ ಪಡಿಸಲಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.