ADVERTISEMENT

ಬೆಳಗಾವಿ | ಕಲುಷಿತ ನೀರು ಸೇವಿಸಿ ವಾಂತಿ ಭೇದಿ ಉಲ್ಬಣ: 41 ಮಂದಿ ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2024, 16:57 IST
Last Updated 12 ಆಗಸ್ಟ್ 2024, 16:57 IST
<div class="paragraphs"><p>ಸವದತ್ತಿ ತಾಲ್ಲೂಕಿನ ಚಚಡಿ ಗ್ರಾಮದಲ್ಲಿ ವಾಂತಿ ಭೇದಿಯಿಂದ ಚಿಕಿತ್ಸೆ ಪಡೆಯುತ್ತಿರುವವರನ್ನು ಡಾ.ಮಹೇಶ ಕೋಣಿ ಹಾಗೂ ಯಶವಂತಕುಮಾರ ಪರಿಶೀಲಿಸಿದರು</p></div>

ಸವದತ್ತಿ ತಾಲ್ಲೂಕಿನ ಚಚಡಿ ಗ್ರಾಮದಲ್ಲಿ ವಾಂತಿ ಭೇದಿಯಿಂದ ಚಿಕಿತ್ಸೆ ಪಡೆಯುತ್ತಿರುವವರನ್ನು ಡಾ.ಮಹೇಶ ಕೋಣಿ ಹಾಗೂ ಯಶವಂತಕುಮಾರ ಪರಿಶೀಲಿಸಿದರು

   

ಚಚಡಿ (ಬೆಳಗಾವಿ ಜಿಲ್ಲೆ): ಸವದತ್ತಿ ತಾಲ್ಲೂಕಿನ ಚಚಡಿ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಆರಂಭವಾದ ವಾಂತಿ– ಭೇದಿ ಸೋಮವಾರ ಉಲ್ಬಣಗೊಂಡಿದೆ. ಒಂದೇ ದಿನ 41 ಮಂದಿಗೆ ವಾಂತಿ– ಭೇದಿ ಕಾಣಿಸಿಕೊಂಡಿದೆ. ತೀವ್ರ ಅಸ್ವಸ್ಥರಾದ ಮೂವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ, ಮೂವರನ್ನು ಬೈಲಹೊಂಗಲ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿತ್ರಾಣಗೊಂಡಿರುವ ಈರವ್ವ ಗಾಳಿಮಠ (63) ಅವರನ್ನು ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಸೇರಿಸಲಾಗಿದೆ. ಇನ್ನಿಬ್ಬರು ಒಳರೋಗಿಗಳಾಗಿ ದಾಖಲಾಗಿದ್ದಾರೆ. ಉಳಿದವರು ಚಚಡಿ ಹಾಗೂ ಇಂಚಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ವಿಷಯ ತಿಳಿದು ಗ್ರಾಮಕ್ಕೆ ಧಾವಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ ಕೋಣಿ ತುರ್ತು ಚಿಕಿತ್ಸೆಯ ವ್ಯವಸ್ಥೆ ಮಾಡಿದರು.

‘ಕಲುಷಿತ ನೀರು ಸೇವನೆಯಿಂದ ವಾಂತಿ– ಭೇದಿ ಕಾಣಿಸಿಕೊಂಡಿದೆ. ಪ್ರಾಣಾಪಾಯ ಆಗಿಲ್ಲ. ನಿತ್ರಾಣಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ಮುಂದುವರಿಸಲಾಗಿದೆ. ಗ್ರಾಮದಲ್ಲಿ ನಾಲ್ವರು ವೈದ್ಯರು ಹಾಗೂ ಹಲವು ವೈದ್ಯಕೀಯ ಸಿಬ್ಬಂದಿ ಸ್ಥಳದಲ್ಲೇ ಇದ್ದಾರೆ. ನೀರನ್ನು ಕುದಿಸಿ ಆರಿಸಿ ಕುಡಿಯುವಂತೆ ಜಾಗೃತಿ ಮೂಡಿಸಲಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸವದತ್ತಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಯಶವಂತಕುಮಾರ್‌ ಮಾತನಾಡಿ, ‘ಸಮಸ್ಯೆ ಉಲ್ಬಣವಾಗುತ್ತಿದ್ದಂತೆ ಎಚ್ಚರಿಕೆ ಕ್ರಮ ವಹಿಸಲಾಗಿದೆ. ಗ್ರಾಮದ ಬೋರ್‌ವೆಲ್‌ಗಳ ನೀರನ್ನು ತಪಾಸಣೆಗೆ ಕಳಿಸಲಾಗಿದೆ. ಸೋಮವಾರ ಗ್ರಾಮಕ್ಕೆ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಸಲಾಗಿದೆ. ಓವರ್‌ಹೆಡ್‌ ಟ್ಯಾಂಕಿನಿಂದ ನೀರು ಸ್ಥಗಿತ ಮಾಡಲಾಗಿದೆ’ ಎಂದರು.

‘ಮಂಗಳವಾರ ಟ್ಯಾಂಕನ್ನು ಸಂಪೂರ್ಣ ಖಾಲಿ ಮಾಡಿ, ಒಣಗಿಸಿ ಮತ್ತೆ ನೀರು ಭರ್ತಿ ಮಾಡಲಾಗುವುದು. ಆ ನೀರನ್ನು ಕೂಡ ನಳಗಳ ಮೂಲಕ ಹರಿಬಿಟ್ಟು ಮತ್ತೆ ಟ್ಯಾಂಕ್‌ ಖಾಲಿ ಮಾಡಲಾಗುವುದು. ಇದರಿಂದ ಟ್ಯಾಂಕ್ ಅಥವಾ ನಳಗಳಲ್ಲಿ ಎಲ್ಲಿಯೇ ಮಲಿನ ನೀರು ಸೇರಿಕೊಂಡಿದ್ದರೂ ಸ್ವಚ್ಛವಾಗುತ್ತದೆ. ಮತ್ತೊಮ್ಮೆ ತಪಾಸಣೆ ಮಾಡಿದ ಬಳಿಕ ನೀರು ಪೂರೈಸಲಾಗುವುದು. ಕುಡಿಯುವ ನೀರಿನ ಬವನೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಪಿಡಿಒ ನಿರ್ಲಕ್ಷ್ಯ: ‘ಗ್ರಾಮದಲ್ಲಿ ಪಿಡಿಒ ನಿರ್ಲಕ್ಷ್ಯ ವಹಿಸಿದ್ದರಿಂದ ಸಮಸ್ಯೆ ಉಲ್ಬಣವಾಗಿದೆ. ಗ್ರಾಮದಲ್ಲಿ ನೀರು ಶುದ್ಧೀಕರಣ ಘಟಗಳು ಇದ್ದರೂ ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ. ವಾಂತಿ ಭೇದಿ ಸಮಸ್ಯೆ ಸಣ್ಣದು ಇದ್ದಾಗಲೇ ಎಚ್ಚೆತ್ತುಕೊಂಡಿಲ್ಲ. ಈ ಅವಘಡಕ್ಕೆ ಕಾರಣ ಕಂಡುಕೊಂಡ ಮೇಲೆ ಅವರ ಮೇಲೆ ಕ್ರಮ ಜರುಗಿಸಲಾಗುವುದು’ ಎಂದೂ ಹೇಳಿದರು.

ಪೈಪ್‌ಲೈನ್‌ಗೆ ಸೇರಿದ ಚರಂಡಿ ನೀರು
ಗ್ರಾಮದ ಬೋರ್‌ವೆಲ್‌ಗಳ ಮೂಲಕ ಓವರ್‌ಹೆಡ್‌ ಟ್ಯಾಂಕಿಗೆ ನೀರು ತುಂಬಿಸಲಾಗುತ್ತದೆ. ಅಲ್ಲಿಂದ ಮನೆಮನೆಗೆ ನಳಗಳ ಮೂಲಕ ಹರಿಸಲಾಗುತ್ತದೆ. ಮನೆಗಳಿಗೆ ನೀರು ಸರಬರಾಜು ಮಾಡುವ ಪೈಪ್‌ಲೈನಿನಲ್ಲಿ ಚರಂಡಿ ನೀರು ಸೇರಿಕೊಂಡಿದ್ದರಿಂದ ಈಗ ಅವಘಡ ಸಂಭವಿಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಸದ್ಯ ವೀರಭದ್ರೇಶ್ವರ ದೇವಸ್ಥಾನದ ಸುತ್ತಲಿನ ಪ್ರದೇಶದಲ್ಲಿ ಸಮಸ್ಯೆ ಉಲ್ಬಣವಾಗಿದೆ. ಇಡೀ ಊರಿಗೆ ಹಬ್ಬುವ ಮುನ್ನವೇ ಕ್ರಮ ವಹಿಸಬೇಕು ಎಂದೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಮಹಾಂತೇಶ ಕೌಜಲಗಿ, ಅಧಿಕಾರಿ ಹಾಗೂ ಗ್ರಾಮಸ್ಥರಿಂದ ಮಾಹಿತಿ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.