ಬೆಳಗಾವಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ‘ಜ್ಞಾನಸಂಗಮ’ ಕ್ಯಾಂಪಸ್ನಲ್ಲಿ ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದರು.
‘ಕೋವಿಡ್–19 ಕಾರಣದಿಂದ ತರಗತಿಗಳನ್ನು ಆನ್ಲೈನ್ನಲ್ಲಿ ನಡೆಸಲಾಗಿದೆ. ಹೀಗಿರುವಾಗ ಆಫ್ಲೈನ್ನಲ್ಲಿ ಮಾತ್ರವೇ ಪರೀಕ್ಷೆ ನಡೆಸುವುದು ಸರಿಯಲ್ಲ. ಪರೀಕ್ಷೆಯನ್ನು ಆಫ್ಲೈನ್ ಹಾಗೂ ಆನ್ಲೈನ್ ಎರಡರಲ್ಲೂ ನಡೆಸಬೇಕು. ಆಯ್ಕೆಯನ್ನು ನಮಗೆ ಬಿಡಬೇಕು’ ಎಂದು ಒತ್ತಾಯಿಸಿದರು.
‘ಕಾಲೇಜುಗಳ ಹಾಸ್ಟೆಲ್ಗಳಲ್ಲಿ ಕೊಠಡಿಗಳ ಕೊರತೆ ಇರುವುದರಿಂದ ಅಂತರರಾಜ್ಯ ಹಾಗೂ ಸ್ಥಳೀಯರಲ್ಲದ ವಿದ್ಯಾರ್ಥಿಗಳಿಗೆ ವಸತಿ ವಿಷಯದಲ್ಲಿ ಬಹಳ ತೊಂದರೆ ಆಗುತ್ತಿದೆ. ಕೋವಿಡ್ ಕಾರಣದಿಂದಾಗಿ ಹೊರಗಿನ ವಿದ್ಯಾರ್ಥಿಗಳಿಗೆ ಕೊಠಡಿ ಅಥವಾ ಮನೆ ಕೊಡುವುದಕ್ಕೆ ಸ್ಥಳೀಯರು ಹಿಂಜರಿಯುತ್ತಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳು ಬಂದು ಉಳಿದುಕೊಳ್ಳುವುದು ಮತ್ತು ಪರೀಕ್ಷೆಗೆ ಹಾಜರಾಗುವುದಕ್ಕೆ ತೊಂದರೆ ಆಗುತ್ತಿದೆ’ ಎಂದು ತಿಳಿಸಿದರು.
‘ಕೆಲವು ವಿದ್ಯಾರ್ಥಿಗಳಿಗೆ ಕೋವಿಡ್–19 ದೃಢಫಟ್ಟಿರುವುದೂ ವರದಿಯಾಗಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ನಿರ್ಧಾರ ಕೈಗೊಳ್ಳಬೇಕು. ಆಫ್ಲೈನ್ನಲ್ಲೇ ಪರೀಕ್ಷೆ ನಡೆಸುವುದಾದರೆ, 30 ದಿನಗಳವರೆಗೆ ಆಫ್ಲೈನ್ ತರಗತಿಗಳನ್ನು ನಡೆಸಬೇಕು. ಜೊತೆಗೆ, ವಿದ್ಯಾರ್ಥಿಗಳಿಗೆ ಕೋವಿಡ್ ದೃಢಪಟ್ಟರೆ ವಿಶ್ವವಿದ್ಯಾಲಯವೇ ಅದರ ಹೊಣೆ ಹೊತ್ತುಕೊಳ್ಳಬೇಕು’ ಎಂದು ಒತ್ತಾಯಿಸಿ ಕುಲಪತಿ ಪ್ರೊ.ಕರಿಸಿದ್ದಪ್ಪ ಅವರಿಗೆ ಮನವಿ ಸಲ್ಲಿಸಿದರು.
ವಿದ್ಯಾರ್ಥಿಗಳಾದ ಅನುದೀಪ್ ಕುಲಕರ್ಣಿ, ಕಾರ್ತಿಕ ಶಿಗ್ಲಿ, ಸುಷ್ಮಾ, ಆದಿತ್ಯ ಬಸ್ತವಾಡಕರ ಹಾಗೂ ವಿನಾಯಕ ಇದ್ದರು.
ಈ ವಿಷಯವಾಗಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲೂ ಪ್ರತಿಭಟನೆ ದಾಖಲಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.