ಖಾನಾಪುರದಲ್ಲಿ ಶುಕ್ರವಾರ ವಿ.ವೈ ಚವಾಣ ಪಾಲಿಟೆಕ್ನಿಕ್ ಉದ್ಘಾಟಿಸಿದ ಮಾಜಿ ಸಚಿವ ಆರ್.ವಿ. ದೇಶಪಾಂಡೆ ಬಳಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಶಾಸಕ ವಿಠ್ಠಲ ಹಲಗೇಕರ ಇದ್ದರು
ಖಾನಾಪುರ: ಪಟ್ಟಣದ ಲೋಕಮಾನ್ಯ ಭವನ ಕಟ್ಟಡದಲ್ಲಿ ಶುಕ್ರವಾರ ಲೋಕಮಾನ್ಯ ಶಿಕ್ಷಣ ಸಂಸ್ಥೆಯಿಂದ ಹೊಸದಾಗಿ ಆರಂಭಗೊಂಡ ವಿ.ವೈ ಚವಾಣ ಪಾಲಿಟೆಕ್ನಿಕ್ ಲೋಕಾರ್ಪಣೆ ಕಾರ್ಯಕ್ರಮ ಶುಕ್ರವಾರ ಸಂಸ್ಥೆಯ ಸಂಸ್ಥಾಪಕ ಕಿರಣ ಠಾಕೂರ ಅಧ್ಯಕ್ಷತೆಯಲ್ಲಿ ಜರುಗಿತು.
ಪಾಲಿಟೆಕ್ನಿಕ್ ಲೋಕಾರ್ಪಣೆಗೊಳಿಸಿದ ಹಳಿಯಾಳ ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿ, ‘ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಹೊತ್ತ ಖಾನಾಪುರದಲ್ಲಿ ಲೋಕಮಾನ್ಯ ಶಿಕ್ಷಣ ಸಂಸ್ಥೆ ಡಿಪ್ಲೋಮಾ ಕೋರ್ಸುಗಳನ್ನು ಆರಂಭಿಸಿದ್ದು ಉತ್ತಮ ಬೆಳವಣಿಗೆ. ಹಳಿಯಾಳದಲ್ಲಿ ಎಂಜಿನಿಯರಿಂಗ್ ಕಾಲೇಜು ಸೇರಿದಂತೆ ಹಲವಾರು ಉನ್ನತ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇದೇ ಮಾದರಿಯಲ್ಲಿ ಖಾನಾಪುರ ತಾಲ್ಲೂಕಿನಲ್ಲೂ ಶೈಕ್ಷಣಿಕ ಕ್ರಾಂತಿ ನಡೆಯಬೇಕು’ ಎಂದರು.
‘ಇಲ್ಲಿಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣ ದೊರೆಯಬೇಕು. ಇದಕ್ಕೆ ಸ್ಥಳೀಯ ಜನಪ್ರತಿನಿಧಿಗಳ ಆಸಕ್ತಿ, ಜನರ ಸಹಕಾರ ಅವಶ್ಯವಿದ್ದು, ಈ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು ಆಸಕ್ತಿ ವಹಿಸಿ ಕೆಲಸ ಮಾಡಬೇಕು’ ಎಂದು ಸೂಚಿಸಿದರು.
ಆರ್.ಸಿ.ಯು ಕುಲಪತಿ ಸಿ.ಎಂ ತ್ಯಾಗರಾಜ ಮಾತನಾಡಿ, ‘ತಂತ್ರಜ್ಞಾನ ಮತ್ತು ಕೌಶಲ ಪ್ರದರ್ಶನದಲ್ಲಿ ಭಾರತೀಯರು ಸದಾ ಮುಂದಿದ್ದಾರೆ. ಇಂದಿನ ಯುವಕ-ಯುವತಿಯರು ತಂತ್ರಜ್ಞಾನದಲ್ಲಿ ನಿಪುಣರಾಗಿದ್ದು, ಇವರಿಗೆ ಮಾರ್ಗದರ್ಶನದ ಅವಶ್ಯಕತೆಯಿದೆ’ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ವಿಠ್ಠಲ ಹಲಗೇಕರ, ಮಾಜಿ ಶಾಸಕರಾದ ಅರವಿಂದ ಪಾಟೀಲ, ದಿಗಂಬರ ಪಾಟೀಲ, ಪಟ್ಟಣ ಪಂಚಾಯತಿ ಅಧ್ಯಕ್ಷೆ ಮೀನಾಕ್ಷಿ ಬೈಲೂರಕರ, ತಾಂತ್ರಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ವಾಯ್,ಎನ್ ದೊಡಮನಿ, ಬೆಳಗಾವಿ ಸರ್ಕಾರಿ ಪಾಲಿಟೆಕ್ನಿಕ್ ಪ್ರಾಚಾರ್ಯ ವಾಸುದೇವ ಅಪ್ಪಾಜಿಗೋಳ, ಪಂಢರಿ ಪರಬ, ಸುಬೋಧ ಗಾವಡೆ, ಸತ್ಯವೃತ ನಾಯ್ಕ, ಡಿ.ಎನ್ ಮಿಸಾಳೆ, ಶಿರೀಷ ಕೆರೂರ, ಪ್ರಕಾಶ ಚವಾಣ, ವಿವೇಕ ಗಿರಿ, ಕಿರಣ ಗಾವಡಾ, ಶರಯೂ ಕದಮ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.