ಬೆಳಗಾವಿ: ‘ಮಾನಸಿಕ ಕಾಯಿಲೆ ಶಾಪವಲ್ಲ. ಸೂಕ್ತ ಚಿಕಿತ್ಸೆಯಿಂದ ನೆಮ್ಮದಿಯ ಬದುಕು ಪಡೆಯಬಹುದು’ ಎಂದು ಉತ್ತರ ಕ್ಷೇತ್ರದ ಶಾಸಕ ಅನಿಲ ಎಸ್. ಬೆನಕೆ ಹೇಳಿದರು.
ಎಪಿಡಿ (ಅಸೋಸಿಯೇಶನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ) ಸಂಸ್ಥೆಯು ವಿಶ್ವ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಂಗವಾಗಿ ಶುಕ್ರವಾರ ನಗರದಲ್ಲಿ ಹಮ್ಮಿಕೊಂಡಿದ್ದ ವಾಕಥಾನ್ಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಉತ್ತಮ ಆರೋಗ್ಯಕ್ಕೆ ನಡಿಗೆ ಸಹಕಾರಿಯಾಗಿದೆ. ಮುಂಜಾನೆ ನಿಯಮಿತವಾಗಿ ವಾಯುವಿಹಾರ ಮಾಡುವುದರಿಂದ ಅರೋಗ್ಯ ಕಾಪಾಡಿಕೊಳ್ಳಬಹುದು’ ಎಂದು ತಿಳಿಸಿದರು.
ಬಿಮ್ಸ್ನ ಮನೋವೈದ್ಯೆ ಡಾ.ಸರಸ್ವತಿ, ‘ಮಾನಸಿಕ ಕಾಯಿಲೆಯು ಸಾಮಾನ್ಯ ಸಮಸ್ಯೆಯಾಗಿದ್ದು, ಎಲ್ಲ ವಯೋಮಾನದವರಲ್ಲೂ ಕಂಡು ಬರುತ್ತಿದೆ. ಇದಕ್ಕೆ, ಇಂದಿನ ತಂತ್ರಜ್ಞಾನದ ಆಧಾರಿತ ಜೀವನಶೈಲಿಯು ಮುಖ್ಯ ಕಾರಣವಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಿದೆ. ವ್ಯಾಯಾಮ, ನಡಿಗೆ, ದ್ಯಾನ, ಯೋಗದಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಶ್ರವಣದೋಷವುಳ್ಳ ಮಕ್ಕಳ ಸರ್ಕಾರಿ ಶಾಲೆ ಅಧೀಕ್ಷಕ ಆರ್.ಬಿ. ಬನಶಂಕರಿ, ಎಇಡಿ ಸಂಸ್ಥೆ ಉಪನಿರ್ದೇಶಕ ಶಿವ ಹಿರೇಮಠ ಮಾತನಾಡಿದರು.‘ಆತ್ಮಹತ್ಯೆ ತಡೆಗಟ್ಟೋಣ’ ಎಂಬುದು ಈ ವರ್ಷದ ಘೋಷವಾಕ್ಯವಾಗಿದೆ. ಸರ್ದಾರ್ ಮೈದಾನ ಬಳಿಯಿಂದ ಆರಂಭವಾದ ವಾಕಥಾನ್ ಕಿಲ್ಲಾ ಕೆರೆ ಆವರಣದಲ್ಲಿ ಕೊನೆಗೊಂಡಿತು. ವಿಲಾಸ ಕೆರೂರ, ಸಂತೋಷ.ಎಸ್., ಎ.ಎನ್. ಸವದತ್ತಿ, ವೈ. ಅನುಪಮಾ, ಜೆ.ಎಸ್. ಒಡೆಯರ, ಶ್ರೀಧರ ಪಾಟೀಲ, ಚನ್ನಪ್ಪ ಕುಂಬಾರ, ಸಂತೋಷ ಹಳಮನಿ, ಸುಜಾತಾ ಅರಗಂಜಿ, ಬಸವರಾಜು ಎಂ.ಕೆ., ಬಾಬು ಹೊನೋಳೆ ಭಾಗವಹಿಸಿದ್ದರು.ಜಿ.ಎಂ. ಸಚೇತಾ ಪ್ರಾರ್ಥಿಸಿದರು. ಎಪಿಡಿ ಸಹಾಯಕ ನಿರ್ದೇಶಕ ರಮೇಶ ಗೊಂಗಡಿ ಸ್ವಾಗತಿಸಿದರು. ವಿಭಾಗೀಯ ವ್ಯವಸ್ಥಾಪಕ ಬಾಬು ನೇಜಕರ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.