ADVERTISEMENT

ಪಕ್ಷದ ಸಿದ್ಧಾಂತ ಮುಖ್ಯ, ಕೌಟುಂಬಿಕ ವಿಚಾರವಲ್ಲ: ಸತೀಶ್ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 14:27 IST
Last Updated 11 ಮಾರ್ಚ್ 2023, 14:27 IST
ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ   

ಗೋಕಾಕ (ಬೆಳಗಾವಿ ಜಿಲ್ಲೆ): ‘ನಾನು ಪಕ್ಷದ ಸಿದ್ಧಾಂತರ ತಳಹದಿ ಮೇಲೆ ಚುನಾವಣೆಗೆ ಹೋಗುತ್ತೇನೆ ಹೊರತು; ಕೌಟುಂಬಿಕ ವಿಚಾರಗಳನ್ನು ಅನುಸರಿಸುವುದಿಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

‘ಯಮಕನಮರಡಿ ಕ್ಷೇತ್ರದಲ್ಲಿ ಬಿಜೆಪಿಯಿಂದ ರಮೇಶ ಜಾರಕಿಹೊಳಿ ಅವರನ್ನು ಕಣಕ್ಕಿಳಿಸುವ ಯತ್ನ ನಡೆದಿದೆ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್‌ ‍ಪಕ್ಷದ ಸಿದ್ಧಾಂತಗಳೇ ನನಗೆ ಮುಖ್ಯ. ಯಮಕನಮರಡಿ, ಗೋಕಾಕ ಕ್ಷೇತ್ರದಲ್ಲಿ ಯಾರು ಯಾರ ವಿರುದ್ಧ ಸ್ಪರ್ಧಿಸುತ್ತಾರೆ, ನನ್ನ ವಿರುದ್ಧ ಯಾರು ಸ್ಪರ್ಧಿಸುತ್ತಾರೆ ಎನ್ನುವುದಲ್ಲ’ ಎಂದರು.

‘ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ನಿಪ್ಪಾಣಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿಸುವ ವಿಚಾರ ಸದ್ಯಕ್ಕೆ ಇಲ್ಲ. ಮುಂದೆ ಇದು ಕೂಗೂಡಬಹುದು’ ಎಂದೂ ಹೇಳಿದರು.

ADVERTISEMENT

15ರಂದು ಗೋಕಾಕದಲ್ಲಿ ಪ್ರಜಾಧ್ವನಿ ಯಾತ್ರೆ
ಗೋಕಾಕ:
‘ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗಾಗಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಚುನಾವಣಾ ಪ್ರಚಾರ ಯಾತ್ರೆ 15ರಂದು ನಗರಕ್ಕೆ ಆಗಮಿಸಲಿದೆ. ಮಹರ್ಷಿ ವಾಲ್ಮೀಕಿ ವೃತ್ತ ಬಳಿಯ ಚನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಬೃಹತ್ ಸಭೆ ಆಯೋಜನೆಗೊಳಿಸಲಾಗಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಮಾಹಿತಿ ನೀಡಿದರು.

ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ಮುಖಂಡರಾದ ಎಂ.ಬಿ.ಪಾಟೀಲ, ಅಶೋಕ ಪಟ್ಟಣ, ವೀರಕುಮಾರ ಪಾಟೀಲ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

‘ಪ್ರಜಾಧ್ವನಿ ಯಾತ್ರೆಯುದ್ದಕ್ಕೂ ಪಕ್ಷದ ಮುಖಂಡರು ಕಾಂಗ್ರೆಸ್ ಪಕ್ಷ ಕಳೆದ 50 ವರ್ಷಗಳಿಗೂ ಹೆಚ್ಚಿನ ಅವಧಿಯಲ್ಲಿ ಅದು ಮಾಡಿದ ಅಭಿವೃದ್ಧಿ ಕೆಲಸಗಳು ಏನು ಎಂದು ವಿವರಿಸುವುದಲ್ಲದೇ, ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳ ವೈಫಲ್ಯಗಳು ಮತ್ತು ಅವರು ನಡೆಸುತ್ತಿರುವ ಭ್ರಷ್ಠಾಚಾರವನ್ನು ಬಯಲಿಗೆಳೆಯಲಿದ್ದಾರೆ’ ಎಂದು ವಿವರಿಸಿದರು.

ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಮಾತನಾಡಿ, 15ರಂದು ಬೆಳಿಗ್ಗೆ 11ಕ್ಕೆ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಕುಂಭ ಹೊತ್ತ ಮಹಿಳೆಯರು ಸಕಲ ವಾದ್ಯ-ವೃಂದದೊಂದಿಗೆ ಮೆರವಣಿಗೆ ಮೂಲಕ ಪಕ್ಷದ ಮುಖಂಡರೊಂದಿಗೆ ಚನ್ನಬಸವ ವಿದ್ಯಾಪೀಠದ ಮೈದಾನದತ್ತ ಸಾಗಲಿದ್ದು, ಇದೇ ವೇಳೆ ಪಕ್ಷದ ಕಾರ್ಯಕರ್ತರಿಂದ ಬೈಕ್ ರ್‍ಯಾಲಿ ಕೂಡ ನಡೆಯಲಿದ’ ಎಂದು ವಿವರಿಸಿದರು.

ಮಾಧ್ಯಮ ಪ್ರತಿನಿಧಿಗಳ ಸಮ್ಮುಖದಲ್ಲೇ ತಾಲ್ಲೂಕಿನ ಕೊಳವಿ, ಅಂಕಲಗಿ, ಎಂ.ಮಲ್ಲಾಪೂರ, ಮದವಾಲ, ಕುಂದರಗಿ ಮೊದಲಾದ ಗ್ರಾಮಗಳ ಹತ್ತಾರು ಯುವಕರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಸಮ್ಮುಖದಲ್ಲಿ ಸೇರ್ಪಡೆಗೊಂಡರು.‌

ನಗರಸಭೆ ಮಾಜಿ ಅಧ್ಯಕ್ಷ ಸಿದ್ಲಿಂಗಪ್ಪ ದಳವಾಯಿ, ಚಂದ್ರಶೇಖರ ಕೊಣ್ಣೂರ, ವಿವೇಕ ಜತ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.