ಬೆಳಗಾವಿ: ‘ಬಿಜೆಪಿ ಸಮರ್ಥವಾಗಿದೆ. ನಮ್ಮ ಪಕ್ಷಕ್ಕೆ ನಾಯಕರ ಕೊರತೆ ಇಲ್ಲ; ಬೇರೆಯವರ ಅವಶ್ಯಕತೆಯೂ ಇಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ ಹೇಳಿದರು.
ಕಾಂಗ್ರೆಸ್ ಮುಖಂಡರಾದ ವಿನಯ ಕುಲಕರ್ಣಿ ಮತ್ತು ಎಂ.ಬಿ. ಪಾಟೀಲ ಬಿಜೆಪಿ ಸೇರ್ಪಡೆ ಆಗುತ್ತಾರೆಯೇ ಎಂಬ ಪ್ರಶ್ನೆಗೆ ಶನಿವಾರ ಇಲ್ಲಿ ಪ್ರತಿಕ್ರಿಯಿಸಿದ ಅವರು, ‘ವಿನಯ ಕುಲಕರ್ಣಿ ಪಕ್ಷಕ್ಕೆ ಬರುವ ಯಾವುದೇ ಬೆಳವಣಿಗೆ ನಡೆಯುತ್ತಿಲ್ಲ. ಅಂತಹ ಸಂದರ್ಭ ಬಂದಾಗ ನೋಡೋಣ. ಪಕ್ಷದ ಸಿದ್ಧಾಂತ ಒಪ್ಪಿ ಮತ್ತು ಯಾವುದೇ ಸ್ಥಾನಮಾನಗಳ ಅಪೇಕ್ಷೆ ಇಲ್ಲದೆ ಬರುವ ಎಲ್ಲರನ್ನೂ ಪಕ್ಷಕ್ಕೆ ಸ್ವಾಗತಿಸುತ್ತೇವೆ’ ಎಂದರು.
‘ಸಿಬಿಐ ಸ್ವತಂತ್ರ ಸಂಸ್ಥೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮನೆ ಮೇಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಿ ತನ್ನ ಕಾರ್ಯ ಮಾಡಿದೆ. ಶಿವಕುಮಾರ್ ಕಾನೂನಾತ್ಮಕವಾಗಿ ಹೋರಾಡಿ ಹೊರಬರಲಿ’ ಎಂದು ಹೇಳಿದರು.
‘ನಿಮ್ಮನ್ನು ಬಂಡೆ ಎಂದು ಕರೆಯುತ್ತಾರೆ. ಎಲ್ಲರನ್ನೂ ಎದುರಿಸುತ್ತೀರಿ, ಸಿಬಿಐಯನ್ನು ಎದುರಿಸಲು ಆಗುವುದಿಲ್ಲವೇ?’ ಎಂದು ಶಿವಕುಮಾರ್ ಅವರನ್ನು ಕೇಳಿದರು.
‘ಕಾಂಗ್ರೆಸ್ನವರು ನಮ್ಮ ಮೇಲೆ ಆರೋಪಿಸುತ್ತಿರುವುದು ಸರಿಯಲ್ಲ. ಹಾಗಿದ್ದರೆ, ಅವರು ಅಧಿಕಾರದಲ್ಲಿದ್ದಾಗ ಸಿಬಿಐ ದುರುಪಯೋಗ ಮಾಡಿಕೊಂಡಿದ್ದರೇ’ ಎಂದು ಪ್ರಶ್ನಿಸಿದರು.
‘ಶಿರಾ ಮತ್ತು ಆರ್.ಆರ್. ನಗರ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಇನ್ನೆರಡು ದಿನಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.