ADVERTISEMENT

ತೆಲಂಗಾಣದಲ್ಲಿ 10ಕ್ಕೂ ಅಧಿಕ ಸ್ಥಾನ ಗೆಲ್ಲುತ್ತೇವೆ: ಅಭಯ ಪಾಟೀಲ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2024, 16:12 IST
Last Updated 28 ಮಾರ್ಚ್ 2024, 16:12 IST
ಅಭಯ ಪಾಟೀಲ
ಅಭಯ ಪಾಟೀಲ   

ಬೆಳಗಾವಿ: ‘ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ತೆಲಂಗಾಣದಲ್ಲಿ 17 ಕ್ಷೇತ್ರಗಳ ಪೈಕಿ, 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ’ ಎಂದು ಲೋಕಸಭೆ ಚುನಾವಣೆಯ ತೆಲಂಗಾಣದ ಉಸ್ತುವಾರಿ ವಹಿಸಿಕೊಂಡಿರುವ ಶಾಸಕ ಅಭಯ ಪಾಟೀಲ ಹೇಳಿದರು.

ಇಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತೆಲಂಗಾಣದ ನಾಯಕರು ಹಾಗೂ ಬಿಜೆಪಿ ಚುನಾವಣಾ ಸಮಿತಿ ಭೇಟಿಯಾಗಿ, ಚುನಾವಣೆಯಲ್ಲಿ ಗೆಲ್ಲಲು ಯೋಜನೆ ರೂಪಿಸುತ್ತೇವೆ. ವಾರದಲ್ಲಿ ಮೂರು ದಿನ ಬೆಳಗಾವಿ ಜಿಲ್ಲೆಯಲ್ಲಿ ಹಾಗೂ ಮೂರು ದಿನ ತೆಲಂಗಾಣದಲ್ಲಿ ಪ್ರಚಾರ ಮಾಡುತ್ತೇನೆ. ತೆಲಂಗಾಣದಲ್ಲಿ 10ಕ್ಕೂ ಹೆಚ್ಚು ಸ್ಥಾನ ಗೆಲ್ಲಿಸುವ ಜವಾಬ್ದಾರಿ ಕೊಟ್ಟಿದ್ದಾರೆ. ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ’ ಎಂದರು.

‘ಚಿಕ್ಕೋಡಿ ಮತ್ತು ತೆಲಂಗಾಣ ಎರಡೂ ಕ್ಷೇತ್ರಗಳಲ್ಲಿ ಉಸ್ತುವಾರಿಯಾಗಿ ಕೆಲಸ ಮಾಡುತ್ತೇನೆ. ಚಿಕ್ಕೋಡಿ ಉಸ್ತುವಾರಿ ಹಿಂದಕ್ಕೆ ಪಡೆಯುವಂತೆ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದೇನೆ’ ಎಂದು ಹೇಳಿದರು.

ADVERTISEMENT

‘ಈ ಸಲದ ಚುನಾವಣೆಯಲ್ಲಿ ಸ್ಥಳೀಯ ಅಭ್ಯರ್ಥಿಯನ್ನು ಗೆಲ್ಲಿಸಿ. ಇದು ಜಿಲ್ಲೆಯ ಜನರ ಸ್ವಾಭಿಮಾನದ ಪ್ರಶ್ನೆ’ ಎಂಬ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅಭಯ ಪಾಟೀಲ, ‘ಜಗದೀಶ ಶೆಟ್ಟರ್‌ ಸಾಂಕೇತಿಕವಾಗಿ ಬಿಜೆಪಿ ಅಭ್ಯರ್ಥಿ ಇರಬಹುದು. ಆದರೆ, ನಮ್ಮ ಪಕ್ಷದ ಪ್ರತಿ ಕಾರ್ಯಕರ್ತನೂ ಇಲ್ಲಿ ಅಭ್ಯರ್ಥಿಯೇ. ಸ್ವಾಭಿಮಾನದ ಬಗ್ಗೆ ಚರ್ಚೆ ಮಾಡಲು ಇಡೀದಿನ ಬೇಕಾಗುತ್ತದೆ. ಸೋನಿಯಾ ಗಾಂಧಿ ಕರ್ನಾಟಕಕ್ಕೆ ಬಂದು ಸ್ಪರ್ಧಿಸಿದಾಗ, ನಿಮ್ಮ ಸ್ವಾಭಿಮಾನ ಎಲ್ಲಿಗೆ ಹೋಗಿತ್ತು?’ ಎಂದು ಪ್ರಶ್ನಿಸಿದರು.

‘ಈ ಚುನಾವಣೆಯಲ್ಲಿ ನಾನು ಮನೆಯಲ್ಲಿ ಆರಾಮಾಗಿ ಕೂರುತ್ತೇನೆ’ ಎಂದು ತಾವು ನೀಡಿದ ಹೇಳಿಕೆಯ ವಿಡಿಯೊ ಜಾಲತಾಣದಲ್ಲಿ ಹರಿದಾಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅಭಯ, ‘ಅದು ಕಟ್ ಆ್ಯಂಡ್ ಪೇಸ್ಟ್ ಆಗಿರುವ ವಿಡಿಯೊ. ಈ ಹಿಂದೆ ಹಿರೇಬಾಗೇವಾಡಿ ಶಾಸಕನಿದ್ದಾಗ ಪಕ್ಷವನ್ನು ಬಹಳಷ್ಟು ಸಂಘಟಿಸಿದ್ದೇನೆ. ಈಗ ಕಡಿಮೆ ಓಡಾಡುತ್ತಿದ್ದೇನೆ ಎಂದು ಹೇಳಿದ್ದನ್ನು ಈಗ ಎಡಿಟ್‌ ಮಾಡಿ, ಜಾಲತಾಣದಲ್ಲಿ ಹಾಕಲಾಗಿದೆ’ ಎಂದ‌ರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.