ಬೆಳಗಾವಿ: ‘ಇಲ್ಲಿಂದ ನಾಪತ್ತೆಯಾಗಿದ್ದ ಮಾನಸಿಕ ಅಸ್ವಸ್ಥ ಮಹಿಳೆ ಹಾಗೂ 4 ವರ್ಷದ ಬಾಲಕಿಯನ್ನು ನವದೆಹಲಿಯ ರೈಲ್ವೆ ಸಂರಕ್ಷಣಾ ಪಡೆಯ ಅಧಿಕಾರಿಗಳು ತ್ವರಿತವಾಗಿ ಪತ್ತೆ ಹಚ್ಚಿ ರಕ್ಷಿಸಿ, ನಗರಕ್ಕೆ ಸುರಕ್ಷಿತವಾಗಿ ಕಳುಹಿಸಿಕೊಟ್ಟಿದ್ದಾರೆ’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ತಿಳಿಸಿದ್ದಾರೆ.
‘ಸೆ.6ರಂದು ಮಹಿಳೆ ಬಾಲಕಿಯೊಂದಿಗೆ ಇಲ್ಲಿಂದ ರೈಲಿನಲ್ಲಿ ನವದೆಹಲಿಗೆ ಹೋಗಿದ್ದರು. ಆ ಮಹಿಳೆಯ ಪಾಲಕರು ಮಗಳು ನಾಪತ್ತೆಯಾಗಿದ್ದಾಗಿ ತಿಳಿಸಿ, ಸಹಾಯ ಕೋರಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಇಲಾಖೆ ಅಧಿಕಾರಿಗಳು, ದೆಹಲಿಯ ರೈಲ್ವೆ ಸಂರಕ್ಷಣಾ ಪಡೆಯವರಿಗೆ ಮಾಹಿತಿ ನೀಡಿದ್ದರು. ಅವರು ಅಲ್ಲಿ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾದ ದೃಶ್ಯಗಳ ಸಹಾಯದಿಂದ ಮಹಿಳೆ ಹಾಗೂ ಬಾಲಕಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ದೂರು ಕೊಟ್ಟ ಕೇವಲ ಅರ್ಧ ಗಂಟೆಯಲ್ಲೇ ಯಶಸ್ವಿ ಕಾರ್ಯಾಚರಣೆ ನಡೆಸಿರುವ ಅಧಿಕಾರಿಗಳ ಕಾರ್ಯ ಅಭಿನಂದನಾರ್ಹವಾದುದು’ ಎಂದು ಹೇಳಿದ್ದಾರೆ.
ಸಚಿವರನ್ನು ಇಲ್ಲಿ ಬುಧವಾರ ಭೇಟಿಯಾದ ಮಹಿಳೆ ಹಾಗೂ ಕುಟುಂಬದವರು ಕೃತಜ್ಞತೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.