ಬೆಳಗಾವಿ: ‘ಏನೆಲ್ಲಾ ಸಾಧನೆ ತೋರಿದ್ದರೂ ಹೆಣ್ಣನ್ನು ನೋಡುವ ಸಮಾಜದ ಮನೋಭಾವ ಬದಲಾಗಿಲ್ಲ’ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಡಾ.ನೀತಾ ರಾವ್ ವಿಷಾದಿಸಿದರು.
ಇಲ್ಲಿನ ಸಂಗೊಳ್ಳಿ ರಾಯಣ್ಣ ಘಟಕ ಕಾಲೇಜಿನಲ್ಲಿ ಬುಧವಾರ ನಡೆದ ವಿಶ್ವ ಹೆಣ್ಣು ಮಕ್ಕಳ ದಿನಾಚರಣೆ ಮತ್ತು ಮಹಿಳಾ ಸಬಲೀಕರಣ ಕೋಶ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನಮ್ಮ ಹಕ್ಕುಗಳನ್ನು ನಾವು ಪ್ರತಿಪಾದಿಸಬೇಕು. ಬದಲಾಗುತ್ತಿದ್ದೇನೆಂಬ ಮುಖವಾಡ ಕಳಚಿ ವಾಸ್ತವ ನೆಲೆಯಲ್ಲಿ ಬದುಕಬೇಕು’ ಎಂದರು.
‘ಮಹಿಳಾ ಸಬಲೀಕರಣ ಘಟಕದಿಂದ ಒಳ್ಳೊಳ್ಳೆ ಕಾರ್ಯಕ್ರಮಗಳನ್ನು ರೂಪಿಸಬೇಕು. ಯುವತಿಯರು ಪದವಿ ಶಿಕ್ಷಣ ಮೊಟಕುಗೊಳಿಸದಂತೆ ಕಾಲೇಜಿನವರು ನೋಡಿಕೊಳ್ಳಬೇಕು. ಕೌನ್ಸೆಲಿಂಗ್ ಚಟುವಟಿಕೆಗಳನ್ನೂ ನಡೆಸಬೇಕು. ಶಿಕ್ಷಣದಿಂದ ಮಾತ್ರ ಮಹಿಳಾ ಶಿಕ್ಷಣ ಸಾಧ್ಯವಾಗಲಿದೆ’ ಎಂದರು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕಿ ಮಂಗಳಾ ಹುಗ್ಗಿ, ‘ಶಿಕ್ಷಣ ಕೇವಲ ಜ್ಞಾನಾರ್ಜನೆ ಅಥವಾ ಪದವಿಗೆ ಮಾತ್ರ ಸೀಮಿತವಾಗದೆ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಬೇಕು’ ಎಂದರು.
‘ಹೆಣ್ಣನ್ನು ಪೂಜಿಸುವುದಕ್ಕಿಂತಲೂ ಗೌರವಿಸಬೇಕು. ವಾಸ್ತವದಲ್ಲಿ ಮಹಿಳೆ ಪುರುಷರಿಗಿಂತಲೂ ಎಲ್ಲ ಕೆಲಸಗಳನ್ನು ನಿಭಾಯಿಸುವಂತ ಮಹೋನ್ನತ ಶಕ್ತಿ ಹೊಂದಿದ್ದಾಳೆ’ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಂ. ಜಯಪ್ಪ, ‘ಹಿಂದಿನ ಹಾಗೂ ಇಂದಿನ ಮಹಿಳೆ ಎದುರಿಸುವ ಸಮಸ್ಯೆಗಳು ಬಹು ಭಿನ್ನವಾಗಿವೆ. ಆ ಸಮಸ್ಯೆಗಳನ್ನು ಮೆಟ್ಟಿ ನಿಲ್ಲಬೇಕಾದ ಜವಾಬ್ದಾರಿ ಮಹಿಳೆಯರ ಮೇಲೆಯೇ ಇದೆ. ಪ್ರಕೃತಿದತ್ತವಾಗಿ ಮಹಿಳೆಗೆ ಬಂದ ಬದುಕಿನ ವಾತಾವರಣವನ್ನು ಸಮಾಜ ಎಂದಿಗೂ ಕಸಿದುಕೊಳ್ಳಬಾರದು’ ಎಂದರು.
ವಿದ್ಯಾರ್ಥಿನಿ ರಾಖಿ ಕೆಳಗಿನಮನಿ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕಿ ಯಾಸ್ಮಿನ್ ಬೇಗಂ ನದಾಫ್ ಸ್ವಾಗತಿಸಿದರು. ಡಾ.ಶೋಭಾ ನಾಯಕ ಪ್ರಾಸ್ತಾವಿಕ ಮಾತನಾಡಿದರು. ಡಾ.ಜ್ಯೋತಿ ಪಾಟೀಲ ನಿರೂಪಿಸಿದರು. ಉಪ ಪ್ರಾಚಾರ್ಯ ಅನಿಲ ರಾಮದುರ್ಗ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.