ಬೆಳಗಾವಿ: ‘ಗುಡಿಗಳಲ್ಲಿ ದೇವರಿಲ್ಲ. ಈ ದೇಶವನ್ನು ಕಟ್ಟಿದ ಶ್ರಮಜೀವಿಗಳೇ ನಿಜವಾದ ದೇವರುಗಳು’ ಎಂದು ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್. ದರ್ಗೆ ಹೇಳಿದರು.
ಬಸವ ಪಂಚಮಿ ಅಂಗವಾಗಿ ಬಸವ ಭೀಮ ಸೇನೆಯಿಂದ ಜುಲೈ 27ರವರೆಗೆ ಹಮ್ಮಿಕೊಂಡಿರುವ ‘ನಮ್ಮ ನಡೆ ನಮ್ಮ ಸಮುದಾಯಗಳ ಕಡೆ’ ಎಂಬ ಅಭಿಯಾನದ ಅಂಗವಾಗಿ ಗುರುವಾರ ಅಲೆಮಾರಿ ಬುಡಕಟ್ಟು ಜನಾಂಗದ ಹೋರಾಟಗಾರ ಮಲ್ಲೇಶ ಹೆಳವರ ಅವರನ್ನು ಶ್ರೀನಗರದ ನಿವಾಸದಲ್ಲಿ ಸತ್ಕರಿಸಿ ಅವರು ಮಾತನಾಡಿದರು.
‘ಗ್ರಹಣ, ಸಾಂಕ್ರಾಮಿಕ ರೋಗಗಳಿಗೆ ಹೆದರಿ ಬಾಗಿಲು ಹಾಕಿಕೊಳ್ಳುವ ದೇವಸ್ಥಾನಗಳಲ್ಲಿರುವ ದೇವರುಗಳಿಗೆ ಕೈ ಮುಗಿಯುವ ಬದಲು ಶ್ರಮಜೀವಿಗಳಿಗೆ ಕೈ ಮುಗಿಯುವುದರಲ್ಲಿ ನವ ಸಮಾಜ ಸಾರ್ಥಕತೆ ಕಾಣಬೇಕು. ದೇವರ ಭಯ, ತೀರ್ಥ, ಪ್ರಸಾದ, ಅಭೀಷೇಕ ಎಂಬ ಸನಾತನ ಭ್ರಮೆಗಳಿಂದ ಹೊರ ಬಂದು ಭಯ ಮುಕ್ತ ಸಮಾಜದ ನಿರ್ಮಾಣಕ್ಕೆ ಕೈಜೋಡಿಸಬೇಕು. ಕಲ್ಪಿತ ದೇವರುಗಳ ಜಾಗದಲ್ಲಿ ಬಸವ, ಅಂಬೇಡ್ಕರ್, ಸಾವಿತ್ರಬಾಯಿ ಫುಲೆ, ಅಕ್ಕಮಹಾದೇವಿ ಮೊದಲಾದ ಸಮಾಜ ದೇವರುಗಳನ್ನು ಪ್ರತಿಷ್ಠಾಪಿಸಬೇಕು’ ಎಂದರು.
‘ಬದುಕಿನ ಸಮಸ್ಯೆಗಳು ಹಾಗೂ ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಡಬೇಕು’ ಎಂದು ತಿಳಿಸಿದರು.
ನಿಂಬೆವ್ವ ಹೆಳವರ, ವಿಠ್ಠಲ ಹೆಳವರ, ಮಹಾಂತೇಶ ಹೆಳವರ, ಉದಯ ಹೆಳವರ, ಕಮಲಾ ಹೆಳವರ, ಭೀಮವ್ವ ಹೆಳವರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.