ಬೆಳಗಾವಿ: ‘ಪ್ರಾಕೃತಿಕ ಸಂಕಷ್ಟಗಳಿಗೆ ಮನುಷ್ಯನ ವಿಕೃತಿಯೇ ಕಾರಣವಾಗಿದೆ’ ಎಂದು ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ವಿ. ಪಾಟೀಲ ಹೇಳಿದರು.
ಇಲ್ಲಿನ ನಗರದ ಅರಣ್ಯ ಇಲಾಖೆ ಕಚೇರಿ ಸಭಾಂಗಣದಲ್ಲಿ ವನ್ಯಜೀವಿ ಮತ್ತು ಪರಿಸರ ಅಭಿವೃದ್ಧಿ ವೇದಿಕೆ ಮತ್ತು ಲಿಂಗರಾಜ ಕಾಲೇಜು ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಅರಣ್ಯ ಮತ್ತು ಜಲ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ವನ್ಯಸಂಪತ್ತು ಮತ್ತು ನೀರು ಜೀವ ಜಗತ್ತಿನ ಬದುಕಿನ ಮೂಲ ಆಧಾರ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ನಮ್ಮ ಆಧುನಿಕ ಬದುಕಿನ ಭರಾಟೆಯ ಸಂಸ್ಕೃತಿ ಬದಲಾಗಬೇಕು. ಅರಣ್ಯ ಮತ್ತು ನೀರನ್ನು ದೇವರೆಂದು ತಿಳಿಯಬೇಕು. ಇವೆರಡೂ ಸಂಪತ್ತು ಎಲ್ಲದಕ್ಕೂ ಹೆಚ್ಚು. ಇವುಗಳನ್ನು ಉಳಿಸಿಕೊಳ್ಳುವಲ್ಲಿ ಎಲ್ಲರ ಹೊಣೆಗಾರಿಕೆಯೂ ಆಗಿದೆ’ ಎಂದು ತಿಳಿಸಿದರು.
ವಿಟಿಯು ಪ್ರಾಧ್ಯಾಪಕ ಡಾ.ನಾಗರಾಜ ಪಾಟೀಲ, ‘ಕೆರೆ, ಕಟ್ಟೆಗಳು ಮತ್ತು ಜಲಾಶಯಗಳಲ್ಲಿನ ನೀರು ಅಪವ್ಯಯವಾಗದಂತೆ ಎಚ್ಚರ ವಹಿಸಬೇಕು. ಜಲ ಸಂರಕ್ಷಣೆ ಮಾಡದಿದ್ದರೆ ಮುಂದೆ ಬದುಕು ಕಷ್ಟವಾಗಲಿದೆ’ ಎಂದರು.
ಡಿಎಫ್ಒ ಎಂ.ವಿ. ಅಮರನಾಥ, ಡಾ.ಪರಶುರಾಮ ಪಾಟೀಲ, ಡಾ.ಜಿ.ಎನ್. ಶೀಲಿ, ವೇದಿಕೆಯ ಖಜಾಂಚಿ ಜಗದೀಶ ಮಠದ, ಸದಸ್ಯರಾದ ಎಸ್.ಸಿ. ಕಮತ, ಡಿ.ಎಂ. ಟೊಣ್ಣೆ, ವಿಲಾಸ ಕೆರೂರ, ಜಿ.ಐ. ದಳವಾಯಿ, ಸಿ.ಎಸ್. ಖನಗಣ್ಣಿ, ಆರ್ಎಫ್ಒ ಶಿವಾನಂದ ಮಗದುಮ್ ಇದ್ದರು.
ವೇದಿಕೆಯ ಕಾರ್ಯದರ್ಶಿ ಡಾ.ಡಿ.ಎನ್. ಮಿಸಾಳೆ ಸ್ವಾಗತಿಸಿದರು. ಅಧ್ಯಕ್ಷ ಸುರೇಶ ಉರಬಿನಹಟ್ಟಿ ಪರಿಚಯಿಸಿದರು. ಪ್ರೊ.ಎಸ್.ಎನ್. ಮೂಲಿಮನಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.