ADVERTISEMENT

ನೀರು ಮಿತ ಬಳಕೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2019, 11:19 IST
Last Updated 22 ಮಾರ್ಚ್ 2019, 11:19 IST
ಬೆಳಗಾವಿಯಲ್ಲಿ ವಿಶ್ವ ಜಲ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಗೋಪಾಲಕೃಷ್ಣ ಸಣತಂಗಿ ಬಹುಮಾನ ವಿತರಿಸಿದರು
ಬೆಳಗಾವಿಯಲ್ಲಿ ವಿಶ್ವ ಜಲ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಗೋಪಾಲಕೃಷ್ಣ ಸಣತಂಗಿ ಬಹುಮಾನ ವಿತರಿಸಿದರು   

ಬೆಳಗಾವಿ: ‘ಜೀವ ಜಲವಾದ ನೀರು ನಾವೆಲ್ಲಾ ಸದಾ ಕಾಪಾಡಬೇಕಾದ ಹಾಗೂ ಸರಿಯಾಗಿ ನಿರ್ವಹಿಸಬೇಕಾದ ಅಪೂರ್ವ ನೈಸರ್ಗಿಕ ಸಂಪತ್ತು. ಪ್ರತಿ ಹನಿಯೂ ಅಮೂಲ್ಯ, ಅದನ್ನು ಸಂರಕ್ಷಿಸಬೇಕು’ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಗೋಪಾಲಕೃಷ್ಣ ಸಣತಂಗಿ ಇಲ್ಲಿ ಸಲಹೆ ನೀಡಿದರು.

ರಾಜ್ಯ ವಿಜ್ಞಾನ ಪರಿಷತ್ತು, ಮಾಲಿನ್ಯ ನಿಯಂತ್ರಣ ಮಂಡಳಿ, ಸ.ಜ. ನಾಗಲೋಟಿಮಠ ವಿಜ್ಞಾನ ಕೇಂದ್ರ ಹಾಗೂ ಪರಿಸರ ಮಿತ್ರ ಸಂಘದ ಸಹಯೋಗದಲ್ಲಿ ವಿಶ್ವ ಜಲ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

‘ಭೂಮಿಯ ಮೇಲೆ ಜೀವಿಗಳು ಬದುಕುಳಿಯಲು ನೀರು ಅತ್ಯವಶ್ಯ. ಅದನ್ನು ಜಾಗರೂಕತೆಯಿಂದ ಬಳಸಬೇಕು ಹಾಗೂ ಮಿತವ್ಯಯ ಮಾಡಬೇಕು’ ಎಂದು ತಿಳಿಸಿದರು.

ADVERTISEMENT

ಸ.ಜ. ನಾಗಲೋಟಿಮಠ ವಿಜ್ಞಾನ ಕೇಂದ್ರದ ಯೋಜನಾ ಸಹಾಯಕ ರಾಜಶೇಖರ ಪಾಟೀಲ ಮಾತನಾಡಿ, ‘ವಿಶ್ವದಲ್ಲಿ 66 ಲಕ್ಷದಷ್ಟು ಜನರು ಕುಡಿಯಲು ಯೋಗ್ಯವಾದ ನೀರಿಲ್ಲದೇ ಬಳಲುತ್ತಿದ್ದಾರೆ. ಹಲವರು ಕಲುಷಿತ ನೀರು ಸೇವಿಸಿ ಅನೇಕ ರೋಗರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಹೀಗಾಗಿ, ಜಲ ಹಾಗೂ ಜಲಮೂಲಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಪ್ರತಿಯೊಬ್ಬರು ಕನಿಷ್ಠ ಶೇ 10ರಷ್ಟು ನೀರು ಉಳಿಸಬಹುದಾದ ಸುಲಭ ವಿಧಾನಗಳನ್ನು ಅನುಸರಿಸಬೇಕು’ ಎಂದರು.

ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಬಸವರಾಜ ಡೋಣಗ, ಅನಿತಾ ತುಕ್ಕಾರ, ಸಹನಾ ಕಲ್ಲೊಳ್ಳಿ ಅವರಿಗೆ ಬಹುಮಾನ ವಿತರಿಸಲಾಯಿತು.

ಪರಿಸರ ಮಿತ್ರ ಸಂಘದ ಅಧ್ಯಕ್ಷ ಪ್ರೊ.ಜಿ.ಕೆ. ಖಡಬಡಿ ಅಧ್ಯಕ್ಷತೆ ವಹಿಸಿದ್ದರು. ಕೆಸಿಸಿ ಕಾರ್ಯದರ್ಶಿ ಶಿವನಾಂದ ಕಡಕೋಳ, ಶ್ರೀಶೈಲ ತಲ್ಲೂರ ಇದ್ದರು. ಉಪನ್ಯಾಸಕ ವಿನಯ ಲಾಸೆ ಸ್ವಾಗತಿಸಿದರು. ಮಾದುರಿ ಶಿರೋಳ್ಕರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.