
ಮುಗಳಖೋಡ: ಇಲ್ಲಿನ ಯಲ್ಲಾಲಿಂಗೇಶ್ವರ ಪ್ರಭುಗಳ 40ನೇ ಪುಣ್ಯಾರಾಧನೆ ಪ್ರಯುಕ್ತ ಕೋಳಿಗುಡ್ಡದ ಮಠದಿಂದ ಪ್ರಾರಂಭವಾದ ಪಲ್ಲಕ್ಕಿ ಉತ್ಸವ ಭಕ್ತರ ಹರ್ಷೋದ್ಗಾರದ ಮಧ್ಯೆ ಗುರುವಾರ ನಡೆಯಿತು.
ಕೋಳಿಗುಡ್ಡ ಆನಂದಾಶ್ರಮದಿಂದ ಸಿದ್ದಲಿಂಗ, ಯಲ್ಲಾಲಿಂಗ, ಸಿದ್ದರಾಮೇಶ್ವರರ ಹಾಗೂ ಆನಂದ ಮಹಾರಾಜರ ಕರ್ತೃ ಗದ್ದುಗೆ ಪೀಠಾಧಿಪತಿ ಮುರುಘರಾಜೇಂದ್ರ ಶ್ರೀಗಳು ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಮಹಾರಾಷ್ಟ್ರ, ತೆಲಂಗಾಣ, ಆಂಧ್ರ, ಗೋವಾ ಹಾಗೂ ರಾಜ್ಯದ ಬೇರೆ ಬೇರೆ ಭಾಗಗಳಿಂದ ಭಕ್ತರು ಸೇರಿದರು. ಯಲ್ಲಾಲಿಂಗನ ಅಂಗಾರ ದೇಶಕ್ಕೆಲ್ಲ ಬಂಗಾರ, ಯಲ್ಲಾಲಿಂಗನ ಜೋಳಿಗೆ ದೇಶಕ್ಕೆಲ್ಲಾ ಹೋಳಿಗೆ ಎಂಬ ಜಯ ಘೋಷಣೆಗಳನ್ನು ಹಾಕುತ್ತ ಭಕ್ತರು ಪಾದಯಾತ್ರೆ ಮಾಡಿದರು. ಹಾರೂಗೇರಿ ಕ್ರಾಸ್, ಹಾರೂಗೇರಿ, ಹಿಡಕಲ್, ಮುಗಳಖೋಡ, ತೋಟಪಟ್ಟಿಯಲ್ಲಿ ಭಕ್ತರ ದಂಡು ಸಾಗರೋಪಾದಿಯಲ್ಲಿ ಮುಗಳಖೋಡದ ಮಠದವರೆಗೆ ಮೆರವಣಿಗೆ ಮೂಲಕ ಬಂದು ಸೇರಿತು.
ಪಟ್ಟಣದ ಮಹಾದ್ವಾರ ಬಳಿ ಬರುತ್ತಿದ್ದಂತೆ ಕರಡಿ ಮಜಲು, ಡೊಳ್ಳು ಕುಣಿತ, ಡಿಜೆ ಸಂಗೀತ, ಕುದುರೆ ಕುಣಿತ ಹಾಗೂ ಇತರೆ ಮೇಳಗಳೊಂದಿಗೆ ಸ್ವಾಗತಿಸಲಾಯಿತು. ಶಾಸಕ ಮಹೇಂದ್ರ ತಮ್ಮಣ್ಣವರ, ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಶಶಿಕಾಂತ ಪಡಸಲಗಿ ಗುರೂಜಿ, ಅಧ್ಯಕ್ಷ ಚೂನಪ್ಪ ಪೂಜಾರಿ, ಪರುಶುರಾಮ ಚಿನಗುಂಡಿ, ರಮೇಶ ಕಲ್ಲಾರ, ಮಲ್ಲಪ್ಪ ಅಂಗಡಿ, ಅಣ್ಣಪ್ಪಗೌಡ ಪಾಟೀಲ, ಶರಣಗೌಡ ಪಾಟೀಲ, ರವಿಶಂಕರ ನರಗಟ್ಟಿ, ಹೊನ್ನಪ್ಪ ನರಗಟ್ಟಿ, ಅವ್ವಣ್ಣ ನರಗಟ್ಟಿ, ಎಂ ಎಸ್ ಗೋಕಾಕ, ಮಹಾದೇವ ಬುಲಬುಲೆ, ಚೇತನ ಯಡವನ್ನವರ, ಹಾಲಪ್ಪ ಶೇಗುಣಸಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.