ಸವದತ್ತಿ: ‘ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರ ವಹಿಸಿಕೊಂಡು 2 ವರ್ಷ ಪೂರ್ಣಗೊಂಡಿವೆ. ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿದೆ. ವಿಶೇಷವಾಗಿ ಎರಡು ಪ್ರಾಧಿಕಾರ ರಚಿಸಿ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗೆ ವೇಗ ಹೆಚ್ಚಿಸಲಾಗಿದೆ’ ಎಂದು ಶಾಸಕ ವಿಶ್ವಾಸ್ ವೈದ್ಯ ಹೇಳಿದರು.
ಇಲ್ಲಿನ ಎಸ್ಕೆ ಹೈಸ್ಕೂಲ್ ಮೈದಾನದಲ್ಲಿ ಶುಕ್ರವಾರ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ವಿವಿಧ ಅನುದಾನ ಸೇರಿ ಒಟ್ಟು ₹215.37 ಕೋಟಿ ಅನುದಾನ ಮೀಸಲಿರಿಸಿ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಸದ್ಯ ನಡೆದ ಅಭಿವೃದ್ಧಿಯಿಂದ ಗುಡ್ಡದ ವ್ಯಾಪಾರಿಗಳಿಗೆ ಸಮಸ್ಯೆಯಾಗಿದೆ. ಭವಿಷ್ಯದಲ್ಲಿ ವ್ಯಾಪಾರಿಗಳ ವಹಿವಾಟು ಹಾಗೂ ಆದಾಯ ದ್ವಿಗುಣಗೊಳಿಸಲು ವ್ಯಾಪಾರಿ ಸಂಕೀರ್ಣ ನಿರ್ಮಿಸಲಾಗುವುದು’ ಎಂದರು.
ತಹಶೀಲ್ದಾರ ಎಂ.ಎನ್. ಹೆಗ್ಗಣ್ಣವರ ಮಾತನಾಡಿದರು.
ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಕರ್ಷಿಸಿದವು. ಪೊಲೀಸ್, ಗೃಹರಕ್ಷಕ, ಎನ್ಸಿಸಿ, ಸ್ಕೌಟ್ ಮತ್ತು ಗೈಡ್ಸ್ಗಳಿಂದ ಶಾಸಕ ವಿಶ್ವಾಸ್ ವೈದ್ಯ ಗೌರವ ರಕ್ಷೆ ಸ್ವೀಕರಿಸಿದರು.
ಇದಕ್ಕೂ ಮೊದಲು ತಹಶೀಲ್ದಾರ್ ಕಚೇರಿಯಿಂದ ಹೊರಟ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ರಾಯಣ್ಣ, ಅಂಬೇಡ್ಕರ್, ಲಿಂಗರಾಜರ ಪ್ರತಿಮೆಗಳಿಗೆ ಗೌರವ ಮಾಲಾರ್ಪಣೆ ಸಲ್ಲಿಸಲಾಯಿತು.
ಪ್ರಾಧಿಕಾರದ ಕಾರ್ಯದರ್ಶಿ ಅಶೋಕ ದುಡಗುಂಟಿ, ಪಿಐ ಡಿ.ಎಸ್. ಧರ್ಮಟ್ಟಿ, ಬಿಇಒ ಎ.ಎ.ಖಾಜಿ, ಮುಖ್ಯಾಧಿಕಾರಿ ಸಂಗನಬಸಯ್ಯ, ಇಒ ಆನಂದ ಬಡಕುಂದ್ರಿ, ಅಶೋಕ ಮುರಗೋಡ, ಅಶ್ವಥ್ ವೈದ್ಯ, ಪಿಎಸ್ಐ ಕೆ.ಎಂ.ಬನ್ನೂರ, ಪ್ರವೀಣ ರಾಮಪ್ಪನವರ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.